ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ನಂತರ ಇದೇ ಮೊದಲ ಬಾರಿಗೆ ಅಂತರ್ ಜಿಲ್ಲಾ ರೈಲು ಸೇವೆ ಪುನರ್ ಆರಂಭಗೊಂಡಿದ್ದು,ಶುಕ್ರವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು ಬೆಳಗಾವಿಗೆ ನಿರ್ಗಮಿಸಿತು. ರೈಲಿನಲ್ಲಿ ಒಳಗಡೆ ಇದ್ದ ಕೆಲ ಪ್ರಯಾಣಿಕರು ಹಾಗೂ ನಿಲ್ದಾಣದಲ್ಲಿದ್ದ ಅಧಿಕಾರಿಗಳು, ಪೊಲೀಸರು ಚಪ್ಪಾಳೆ ತಟ್ಟುವ ಮೂಲಕ ಈ ರೈಲು ಸೇವೆಗೆ ಹರ್ಷ ವ್ಯಕ್ತಪಡಿಸಿದರು. ರಾಜ್ಯದೊಳಗೆ ಸಂಚರಿಸಿದ ಮೊದಲ ರೈಲಿಗೆ ನಿಲ್ದಾಣದಲ್ಲಿನ ಹಂಗಾಮಿ ಸ್ವಚ್ಛತಾ ಕಾರ್ಯ ಸಿಬ್ಬಂದಿ ಮುನಿಯಮ್ಮಲ್ ಮತ್ತು ಪಾಯಿಂಟ್ ಮ್ಯಾನ್ ನಬಿ ಅಹ್ಮದ್ ಹಸಿರು ನಿಶಾನೆ ತೋರಿದರು.
ಬೆಂಗಳೂರು – ಮೈಸೂರು ನಡುವಿನ ವಿಶೇಷ ಎಕ್ಸ್ ಪ್ರೆಸ್ ರೈಲು ಬೆಳಗ್ಗೆ 9-20ಕ್ಕೆ ನಿರ್ಗಮಿಸಿತು. ಕೇವಲ 37 ಪ್ರಯಾಣಿಕರು ಮಾತ್ರ ಬುಕ್ಕಿಂಗ್ ಮಾಡಿಕೊಂಡಿದ್ದರು.ಈ ಮಾರ್ಗದಲ್ಲಿನ ಟಿಕೆಟ್ ದರ 80 ರೂ. ಆಗಿದ್ದು, ಮಧ್ಯದ ರೈಲು ನಿಲ್ದಾಣಗಳಲ್ಲಿ ಕೆಲ ಪ್ರಯಾಣಿಕರು ಹತ್ತಿದ್ದರಿಂದ ಮೈಸೂರಿಗೆ ಹೋಗುವಷ್ಟರಲ್ಲಿ ಪ್ರಯಾಣಿಕರ ಸಂಖ್ಯೆ 63 ಆಗಿತ್ತು. ಸಾಮಾನ್ಯವಾಗಿ ಈ ಮಾರ್ಗದ ರೈಲಿನೊಳಗೆ ನಿಲ್ಲಲು ಜಾಗವಿಲ್ಲದಷ್ಟು ಪ್ರಯಾಣಿಕರು ಇರುತ್ತಾರೆ. ಆದರೆ, ಇಂದಿನ ಪ್ರಯಾಣಿಕರ ಸಂಖ್ಯೆ ಇಂತಹ ನಂಬಿಕೆಯನ್ನು ಸುಳ್ಳಾಗಿಸಿತು.
1484 ಆಸನ ಸಾಮರ್ಥ್ಯದ 14 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಕೇವಲ 338 ಸೀಟುಗಳನ್ನು ಆನ್ ಲೈನ್ ನಲ್ಲಿ ಬುಕ್ಕಿಂಗ್ ಮಾಡಲಾಗಿತ್ತು. 220 ರೂ. ಟಿಕೆಟ್ ದರದೊಂದಿಗೆ ಎಲ್ಲವೂ ಹವಾ ನಿಯಂತ್ರಣ ರಹಿತ ಬೋಗಿಗಳಾಗಿದ್ದು, ಒಟ್ಟು 176 ಪ್ರಯಾಣಿಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಪ್ರಯಾಣಿಸಿದರು. ಉಳಿದ ಪ್ರಯಾಣಿಕರು ದಾವಣಗೆರೆಯಲ್ಲಿ ರೈಲಿಗೆ ಹತ್ತಿದ್ದಾರೆ ಎನ್ನಲಾಗಿದೆ. ಎಲ್ಲಾ ಪ್ರಯಾಣಿಕರು ಮಾಸ್ಕ್ ಗಳು, ಗ್ಲೌಸ್ ಗಳು ಧರಿಸಿದ್ದರು. ಸಾಮಾಜಿಕ ಅಂತರ ನಿಯಮವನ್ನು ಕಡ್ಡಾಯ ಮಾಡಲಾಗಿತ್ತು.ಹಠಾತ್ತನೆ ರೈಲು ಸೇವೆ ಪುನರ್ ಆರಂಭದ ಘೋಷಣೆ ಹಾಗೂ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ನಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡುಬರುತ್ತಿದೆ. ರಾಜ್ಯದಲ್ಲಿನ ಅನೇಕ ನಿಲ್ದಾಣಗಳಲ್ಲಿ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯ ಕೌಂಟರ್ ಗಳು ಇಂದಿನಿಂದ ಕಾರ್ಯನಿರ್ವಹಿಸಲಿವೆ.