ಪ್ರತಿಯೊಬ್ಬ ಮನುಷ್ಯನ ಸಾಧನೆ ಹಾಗೂ ಯಶಸ್ಸನ್ನು ಕೆದಕಿದರೆ ಅದರ ಹಿಂದೆ ಕಷ್ಟಗಳ ಕೂಪವೇ ತೆರೆದುಕೊಳ್ಳತ್ತದೆ. ಇಂದು ಕ್ರಿಕೆಟ್ ಜಗತ್ತಿನ ದೊರೆಯಾಗಿ ರಾರಾಜಿಸುತ್ತಿರುವ ಟೀಂ ಇಂಡಿಯಾ ನಾಯಕ ಹಾಗೂ ಅಗ್ರಮಾನ್ಯ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕೂಡ ಅಂದು ಹಲವು ಕಷ್ಟಗಳನ್ನ ಎದುರಿಸಿಯೇ ಬಂದರು ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ. ತಾವು ಇತರರಿಗಿಂತ ಚೆನ್ನಾಗಿಯೇ ಆಡಿದ್ದರೂ ತಂಡಕ್ಕೆ ಆಯ್ಕೆಯಾಗದಿದ್ದಕ್ಕೆ ಕೊಹ್ಲಿ ರಾತ್ರಿಯಿಡೀ ಅತ್ತಿದ್ದರಂತೆ. ಈ ಕುರಿತು ಸ್ವತಃ ಟೀಮ್ ಇಂಡಿಯಾ ಕ್ಯಾಪ್ಟನ್ ಅಂದಿನ ದುಗುಡವನ್ನು ಹಂಚಿಕೊಂಡಿದ್ದಾರೆ.
ಕೊರೊನಾ ಲಾಕ್ಡೌನ್ನಿಂದಾಗಿ ಕ್ವಾರೆಂಟೈನ್ನಲ್ಲಿರುವ ಕೊಹ್ಲಿ ಮತ್ತವರ ಪತ್ನಿ ಅನುಷ್ಕಾ ಶರ್ಮಾ ವಿದ್ಯಾರ್ಥಿಗಳ ಜೊತೆ ಆನ್ಲೈನ್ ಸೆಷನ್ ನಡೆಸಿದ್ರು. ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರೇರಣೆಗೊಳ್ಳುವುದು ಹೇಗೆ ಅನ್ನೋದರ ಕುರಿತ ಸೆಷನ್ ಇದಾಗಿದೆ. ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಜೀವನದ ಕಹಿ ಘಟನೆಯೊಂದನ್ನ ಮೆಲುಕು ಹಾಕಿದ್ದಾರೆ
ಮೊದಲ ಬಾರಿಗೆ ನನ್ನನ್ನ ರಾಜ್ಯ ಮಟ್ಟದಲ್ಲಿ ಟೂರ್ನಿಯ ಲಿಸ್ಟ್ನಿಂದ ಕೈಬಿಡಲಾಗಿತ್ತು. ಆ ವೇಳೆ ನಾನು ರಾತ್ರಿಯಿಡೀ ಅತ್ತಿದ್ದೆ. ಮುಂಜಾನೆ 3 ಗಂಟೆಯವರೆಗೂ ಒಬ್ಬನೇ ಅಳುತ್ತಾ ಮಲಗಿದ್ದೆ. ಯಾಕಂದ್ರೆ, ನಾನು ಹಿಂದಿನ ಟೂರ್ನಿಗಳಲ್ಲಿ ಚೆನ್ನಾಗಿಯೇ ಆಡಿದ್ದೆ. ಉತ್ತಮ ರನ್ ಗಳಿಸಿದ್ದೆ. ಆದರೂ ನನ್ನನ್ನು ತಂಡದಿಂದ ಕೈಬಿಡಲಾಗಿತ್ತು. ನನ್ನ ಕೋಚ್ ಬಳಿ ಯಾಕೆ ಹೀಗೆ ಮಾಡಿದರು ಅಂತಾ ಕೇಳುತ್ತಿದ್ದೆ. ಪ್ರಯೋಜವಾಗಲಿಲ್ಲ. ಆದರೂ ಕ್ರಿಕೆಟ್ ಮೇಲಿನ ನನ್ನ ಪ್ರೀತಿ ಮತ್ತು ಬದ್ಧತೆ ನನಗೆ ಮುಂದುವರೆಯಲು ಪ್ರೇರೇಪಿಸಿತು ಅಂತಾ ಕೊಹ್ಲಿ ತಮ್ಮ ಹಳೆಯ ನೆನಪನ್ನ ಹಂಚಿಕೊಂಡಿದ್ದಾರೆ.
2013ರಲ್ಲಿ ನನ್ನ ಪತ್ನಿ ಅನುಷ್ಕಾಳನ್ನ ಭೇಟಿ ಮಾಡಿದ ಬಳಿಕ ತಾಳ್ಮೆ ಅನ್ನೋದು ಏನು ಅಂತಾ ಗೊತ್ತಾಯ್ತು. ಅದಕ್ಕೂ ಮೊದಲು ನಾನು ಅಸಹನೀಯವಾಗಿ ವರ್ತಿಸುತ್ತಿದ್ದೆ ಅಂತಾ ಕೊಹ್ಲಿ ಹೇಳಿದ್ದಾರೆ.