ಬೆಂಗಳೂರು: ನ್ಯಾಯಾಂಗ ಬಂಧನಕ್ಕೆ ನೀಡುವ ಆರೋಪಿಗಳಿಗೆ ಕೊರೊನಾ ಸಂಬಂಧಪಟ್ಟ ಠಾಣೆಯ ಅಧಿಕಾರಿಗಳು ಕೊರೊನಾ ಟೆಸ್ಟ್ ಮಾಡಿಸಿ, ನಂತರ ಜೈಲಿಗೆ ಬಿಡಬೇಕು ಅಂತ ಬೆಂಗಳೂರು ಸೆಂಟ್ರಲ್ ಜೈಲು ಅಧೀಕ್ಷಕರಾದ ವಿ. ಶೇಷುಮೂರ್ತಿ, ಪ್ರಧಾನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಈಗಾಗಲೇ 5000 ಕೈದಿಗಳಿದ್ದಾರೆ. ಸಾಮಾನ್ಯ ಸಾಮರ್ಥ್ಯಕ್ಕಿಂತ ಇದು ಹೆಚ್ಚಿದೆ. ಕೈದಿಗಳಲ್ಲಿ ಸೋಂಕು ಹರಡದಂತೆ ಸರ್ಕಾರದ ಸೂಚನೆ ಅನ್ವಯ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಆರೋಪಿಗಳಿಗೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳು ಕೊರೊನಾ ಪರೀಕ್ಷೆ ನಡೆಸಿ, ಸೋಂಕು ಇಲ್ಲದಿರುವುದು ದೃಢಪಟ್ಟ ನಂತರವೇ ಜೈಲಿಗೆ ಕಳಿಸಬೇಕೆಂದು ಸೆಂಟ್ರಲ್ ಜೈಲು ಅಧೀಕ್ಷಕರರು ಪತ್ರದ ಮೂಲಕ ಮನವಿ ಮಾಡಿದ್ದಾರೆ.ಒಂದು ವೇಳೆ ಕೊರೊನಾ ಸೋಂಕು ಕಂಡುಬಂದಲ್ಲಿ ಪೊಲೀಸ್ ವಶದಲ್ಲಿಯೇ ಪ್ರತ್ಯೇಕವಾಗಿಟ್ಟು, ಚಿಕಿತ್ಸೆ ಮುಗಿದು ಗುಣಮುಖರಾದ ನಂತರ ಕಾರಾಗೃಹಕ್ಕೆ ಒಪ್ಪಿಸಲು ತಮ್ಮ ಅಧೀನದಲ್ಲಿ ಬರುವ ಎಲ್ಲಾ ನ್ಯಾಯಾಲಯಗಳು ಮತ್ತು ಪೊಲೀಸ್ ಠಾಣೆಗೆ ಸೂಚಿಸುವಂತೆ ಕೇಂದ್ರ ಕಾರಾಗೃಹ ಬೆಂಗಳೂರಿನ ಮುಖ್ಯ ಅಧೀಕ್ಷಕರಾದ ವಿ. ಶೇಷುಮೂರ್ತಿಯವರು, ಪ್ರಧಾನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ.