ನವದೆಹಲಿ: ರಾಸಾಯನಿಕ ಸೋಂಕು ನಿವಾರಕಗಳ ಸಿಂಪಡಣೆಯಿಂದ ದೈಹಿಕ ಅಥವಾ ಮಾನಸಿಕ ಹಾನಿ ಉಂಟಾಗಬಹುದು ಎಂದು ಕೇಂದ್ರ ಆರೋಗ್ಯ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಕೋರೊನಾ ತಡೆಗಟ್ಟುವ ಉದ್ದೇಶದಿಂದ ದೇಶದ ಅನೇಕ ಪ್ರದೇಶಗಳ ತರಕಾರಿ ಮಾರುಕಟ್ಟೆ, ಸರಕಾರಿ ಆಸ್ಪತ್ರೆಗಳಲ್ಲಿ ರೋಗನಿರೋಧಕ ಸುರಂಗಗಳನ್ನು ಸ್ಥಾಪಿಸಿರುವ ಸಂದರ್ಭದಲ್ಲಿ ಸಚಿವಾಲಯ ಈ ಎಚ್ಚರಿಕೆ ನೀಡಿದೆ. ಈ ರೀತಿಯಾಗಿ ಸೋಂಕು ನಿವಾರಕಗಳ ಸಿಂಪಡಣೆ ಮಾಡುವುದರಿಂದ ಜನರಲ್ಲಿ ನಾವು ಸುರಕ್ಷಿತರಾಗಿದ್ದೇವೆ ಎನ್ನುವ ತಪ್ಪು ಕಲ್ಪನೆಯನ್ನು ಮೂಡಿಸುತ್ತದೆ. ಹೀಗಾಗಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಿಂದಾಗ್ಗೆ ಕೈತೊಳೆಯುವ ಅಭ್ಯಾಸವನ್ನು ಬಿಡುತ್ತಾರೆ ಎಂದು ಸಚಿವಾಲಯ ತಿಳಿಸಿದೆ. ಹಲವು ಜಿಲ್ಲಾಡಳಿತಗಳು, ಸ್ಥಳೀಯ ಜನಪ್ರತಿನಿಧಿಗಳು ಇಂಥ ಸುರಂಗಗಳನ್ನು ಸ್ಥಾಪಿಸಿ ಸೋಡಿಯಂ ಹೈಪೊಕ್ಲೋರೈಟ್ ರಾಸಾಯನಿಕವನ್ನು ಸಿಂಪಡಿಸುತ್ತಿದ್ದಾರೆ. ಇಂಥ ದ್ರಾವಣವನ್ನು ಕೇವಲ ನಿರ್ಜೀವ ವಸ್ತುಗಳ ಮೇಲಷ್ಟೇ ಸಿಂಪಡಿಸಬೇಕು. ಕೊವಿಡ್ ಸೋಂಕಿತರು ಅಥವಾ ಶಂಕಿತರು ಮುಟ್ಟಿದ ವಸ್ತುಗಳು ಹಾಗೂ ನೆಸೆರುವ ಜಾಗವನ್ನು ಸ್ವಚ್ಛಗೊಳಿಸಲಷ್ಟೇ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದೆ.