ಅಸ್ಸಾಂನಲ್ಲಿ ಪ್ರವಾಹದಿಂದಾಗಿರುವ ತೀವ್ರ ಅನಾಹುತಗಳಿಂದ ನೊಂದಿರುವುದಾಗಿ ಮಾಜಿ ಪ್ರಧಾನಿ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಅಸ್ಸಾಂನಲ್ಲಿನ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಿ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೆಲವು ದಿನಗಳಿಂದ ಪರಿಸ್ಥಿತಿ ಸ್ಥಿರವಾಗಿ ಹದಗೆಡುತ್ತಿದ್ದು, 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು ನಾಲ್ಕು ದಶಲಕ್ಷದಷ್ಟು ಜನರು ನೋವಿಗೊಳಗಾಗಿದ್ದಾರೆ ಮತ್ತು ಸುಮಾರು 480 ಪರಿಹಾರ ಶಿಬಿರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ 60 ಕ್ಕೂ ಹೆಚ್ಚು ಪ್ರಾಣಿಗಳ ಸಾವು ಬಹಳ ದುಃಖಕರವಾಗಿದೆ. ಅಸ್ಸಾಂನ ಜನರು ಪ್ರವಾಹದ ವಿರುದ್ಧ ಹೋರಾಡುವುದರ ಮಧ್ಯೆಯೇ ಕೊರೊನಾ ಸಾಂಕ್ರಾಮಿಕ ರೋಗವು ದೇಶಾದ್ಯಂತ ಉಲ್ಬಣಗೊಳ್ಳುತ್ತಿದೆ ಎಂದು ಹೇಳಿದ್ದಾರೆ.