ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ನಂತರ ಅತೀ ಹೆಚ್ಚು ಸುದ್ದಿಯಲ್ಲಿರುವವರು ಎಂದರೆ ಅದು ಕಂಗನಾ ರಣಾವತ್. ಹಿಂದಿ ಚಿತ್ರರಂಗದಲ್ಲಿ ಗುಂಪುಗಾರಿಕೆ ಮತ್ತು ಸ್ವಜನಪಕ್ಷಪಾತ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಅವರು ಕೆಲವು ದಿನಗಳ ಹಿಂದೆ ವಿವರವಾಗಿ ಮಾತಾಡಿದ್ದರು. ಹೊರಗಿನಿಂದ ಪ್ರತಿಭಾವಂತರನ್ನು ಹೇಗೆ ಇಲ್ಲಿ ವ್ಯವಸ್ಥಿತವಾಗಿ ತುಳಿದು, ಕೆಲಸ ಇಲ್ಲದಂತೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಬಾಲಿವುಡ್ನ ಕೆಲವು ಪ್ರಭಾವಿಗಳ ಕಾಟ ತಾಳಲಾರದೆ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆರೋಪಿಸಿದ್ದರು. ಕಂಗನಾ ಅವರ ಈ ಆರೋಪಗಳು ಸತ್ಯಕ್ಕೆ ದೂರವಾಗಿವೆ ಮತ್ತು ಕೆಲವರನ್ನು ಹಣಿಯುವ ದೃಷ್ಟಿಯಿಂದ ಬೇಕಂತಲೇ ಅವರು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಸುಶಾಂತ್ ಸಿಂಗ್ ಸಾವಿನ ಬಗ್ಗೆ ತಾನು ಹೇಳಿದ ಮಾತುಗಳು ಸುಳ್ಳು ಎಂದು ನಿರೂಪಿತವಾದರೆ, ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ. ‘ನಾನು ಇದುವರೆಗೂ ಏನೇ ಮಾತಾಡಿದ್ದರೂ, ಸುಮ್ಮನೆ ಮಾತಾಡಿಲ್ಲ. ಪೂರಕ ಸಾಕ್ಷಿಗಳನ್ನು ಇಟ್ಟುಕೊಂಡೇ ಮಾತಾಡಿದ್ದೇನೆ. ಒಂದು ಪಕ್ಷ ಅದು ಸುಳ್ಳಾದರೆ, ಪ್ರಶಸ್ತಿ ವಾಪಸು ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಆರೋಪ ಸುಳ್ಳಾದರೆ ಪದ್ಮಶ್ರೀ ವಾಪಸ್
Please follow and like us: