ಗದಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಕಂಟೈನ್ಮೆಂಟ್ ಏರಿಯಾ ಹೊರತುಪಡಿಸಿ ರಾಜ್ಯಾದ್ಯಂತ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು,ಕೆಲವು ಇಲಾಖೆಯನ್ನು ಸಡಿಲಿಕೆ ಮಾಡಬೇಕೆಂದು ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ಮರಳು ಗಣಿಗಾರಿಕೆಗೂ ಸಡಿಲಿಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅಂತರ ಕಾಯ್ದುಕೊಳ್ಳುವಿಕೆ, ಮುಖಕ್ಕೆ ಮಾಸ್ಕ್ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ, ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ನಿಂತು ಹೋದ ಸರ್ಕಾರಿ ಕಾಮಗಾರಿಗಳಿಗೆ ಮರಳು ಬೇಕಾಗಿದೆ. ಮಳೆ ಆರಂಭವಾದ್ರೆ ನೀರು ಬಂದು ಮರಳು ತೆಗೆಯುವುದು ಕಷ್ಟ. ಹಾಗಾಗಿ ಅಭಿವೃದ್ಧಿ ಕಾರ್ಯಕ್ಕಾಗಿ ಈ ನಿಯಮ ಜಾರಿಗೊಳಿಸಲಾಗಿದೆಯೇ ವಿನ: ಇಲ್ಲಿ ಯಾರ ಲಾಭಿಗೂ ಮಣೆ ಹಾಕಿಲ್ಲ. ಕೇಂದ್ರ ನಿಯಮ ಪ್ರಕಾರ ಸಡಿಲಿಕೆಗೊಳಿಸಲಾಗಿದೆ ಎಂದು ಹೇಳಿದರು.