ಬೆಂಗಳೂರು: ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಮಾಸ್ಕ್ ಮತ್ತು ಸ್ಯಾನಿಟೈಸರ್ ತೀರಾ ಸಾಮಾನ್ಯ ಅಗತ್ಯವಾಗಿದೆ. ಬಟ್ಟೆಯಿಂದ ಮಾಸ್ಕ್ ತಯಾರಿಸಬಹುದಾದ್ದರಿಂದ ಆ ಸಮಸ್ಯೆ ಇಲ್ಲ. ಆದರೆ, ಸ್ಯಾನಿಟೈಸರ್ ಕೊರತೆ ಎಲ್ಲೆಡೆ ಇದೆ. ಸ್ಯಾನಿಟೈಸರ್ಗೆ ಬೇಡಿಕೆ ಹೆಚ್ಚಾಗಿ ಹಲವೆಡೆ ನಕಲಿ ಸ್ಯಾನಿಟೈಸರ್ಗಳ ಮಾರಾಟವಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಸುವ ಪ್ರಸ್ತಾಪ ಮಾಡಿದೆ. ಕೇಂದ್ರದ ಈ ಪ್ರಸ್ತಾಪವನ್ನು ಕೆಪಿಸಿಸಿ ಕಿಸಾನ್ ಸಭಾದ ಅಧ್ಯಕ್ಷ ಸಚಿನ್ ಮೀಗಾ ಕಟುವಾಗಿ ವಿರೋಧಿಸಿದ್ಧಾರೆ. ಅಕ್ಕಿ ಬದಲು ಕಬ್ಬಿನ ತ್ಯಾಜ್ಯದಿಂದ ಸ್ಯಾನಿಟೈಸರ್ ತಯಾರಿಸುವಂತೆ ಅವರು ಸಲಹೆ ನೀಡಿದ್ದಾರೆ.
ಈ ಸಂಬಂಧ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಕಬ್ಬು ಹಾಗೂ ಇತರ ತರಕಾರಿಗಳನ್ನ ಉಪಯೋಗಿಸಿ ಸ್ಯಾನಿಟೈಸರ್ ತಯಾರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಎಂದು ಮನವಿ ಮಾಡಿಕೊಂಡಿದ್ಧಾರೆ. ಅಕ್ಕಿ ಯಾಕೆ ಬೇಡ? ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಸಿದರೆ ಅಕ್ಕಿ ದಾಸ್ತಾನಿಗೆ ಧಕ್ಕೆಯಾಗುತ್ತದೆ. ಮುಂದಿನ ದಿನಗಳಲ್ಲಿ ಆಹಾರ ಕೊರತೆ ತಲೆದೋರಬಹುದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಅಸಂಬದ್ಧ, ಅವೈಜ್ಞಾನಿಕ ಮತ್ತು ದೂರದೃಷ್ಟಿತ್ವ ಇಲ್ಲದ್ದಾಗಿದೆ ಎಂದು ಸಚಿನ್ ಮೀಗಾ ಕಿಡಿಕಾರಿದ್ದಾರೆ.
ಕಬ್ಬಿನ ತ್ಯಾಜ್ಯದಿಂದ ಸ್ಯಾನಿಟೈಸರ್ ತಯಾರಿಸಿ: ಸಚಿನ್ ಮೀಗಾ
Please follow and like us: