ವಿಜಯನಗರ ಜಿಲ್ಲೆ ಹುವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತಗೊಂಡ ನೀರನ್ನ ಸೇವಿಸಿ ಈಗಾಗಲೆ 6 ಜನ ಮೃತಪಟ್ಟಿದ್ದಾರೆ. ಅನೇಕ ಜನ ಅಸ್ವಸ್ಥಗೊಂಡಿದ್ದಾರೆ. ಸಾವಿನ ಸಂಖ್ಯೆ ಜೊತೆ, ವಾಂತಿ ಬೇಧಿಯಂತಹ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವರ ಸಂಖ್ಯೆಯೂ ಹೆಚ್ಚಾಗಿದ್ದು, ಮಕರಬ್ಬಿ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ವಿಜಯನಗರ ಜಿಲ್ಲೆಯಾಗಿ ಘೋಷಣೆಯಾದ ಕೆಲವೆ ದಿನಗಳಾಗಿದ್ದು, ಆರಂಭದಲ್ಲೆ ಜಿಲ್ಲೆಗೆ ಈ ಕಂಟಕ ಎದುರಾಗಿದೆ. ಶುಧ್ದ ಕುಡಿಯುವ ನೀರು ಪೂರೈಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಜನರ ಕಷ್ಟಕ್ಕೆ ಸ್ಪಂದಿಸಿ ಈಗಲೂ ಜನಪ್ರತಿನಿಧಿಗಳು ಯಾವುದೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳಿವೆ. ಜೀವ ಉಳಿಸಿಕೊಳ್ಳುವ ಭರದಲ್ಲಿ ಜನ ಊರನ್ನೆ ಬಿಟ್ಟು ಹೋಗುತ್ತಿದ್ದಾರೆ. ಕುಟುಂಬ ಸಮೇತ ಮನೆ ಖಾಲಿ ಮಾಡಿ ಗ್ರಾಮ ತೊರೆದು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ.
ಗ್ರಾಮದಲ್ಲಿ ʼಜಲ್ ಜೀವನ್ ಮಿಶನ್ʼ ಅಡಿ ಬೋರ್ ವೇಲ್ ನಿಂದ ಹೊಸ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಹಳೆಯ ಪೈಪ್ ಲೈನ್ ಗಳು ಒಡೆದು ಅದರಲ್ಲಿ ಚರಂಡಿ ನೀರು ಮಿಶ್ರಿತಗೊಂಡಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎನ್ನಲಾಗ್ತಿದೆ. ದಾರಿ ಕಾಣದೆ ಗ್ರಾಮಸ್ಥರು ಜೀವ ಜಲಕ್ಕಾಗಿ ಊರು ಬಿಡುತ್ತಿದ್ದಾರೆ.