ರಾಜಧಾನಿಯ ಜನ ಜಾಗತಿಕ ಮಹಾಮಾರಿ ಕೋವಿಡ್ ವಿರುದ್ಧ ಗೆದ್ದುಬರುತ್ತಿದ್ದಾರೆ. ಅಂತಹವರಿಗೆ ಹೂಮಳೆಗರೆದು ಅದ್ದೂರಿಯಾಗಿಯೂ ಬೀಳ್ಕೊಡಲಾಗುತ್ತಿದೆ. ಆದರೆ, ಈ ಕೋವಿಡ್ ಕಲಿಗಳಿಗೆ ಈಗ ಮನೆಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ಹೌದು, ಕೋವಿಡ್ ಗೆದ್ದುಬಂದವರಿಗೆ ನಗರದಲ್ಲಿರುವ ಮನೆಗಳ ಮಾಲೀಕರ ಮನ ಗೆಲ್ಲುವುದೇ ಸವಾಲಾಗಿದೆ. ಕೋವಿಡ್-೧೯ ಆರೈಕೆ ಕೇಂದ್ರದಿAದ ಗುಣಮುಖರಾಗಿ ಮನೆಗೆ ಬಂದರೆೆ ವ್ಯಕ್ತಿಗೆ “ಪ್ರವೇಶವಿಲ್ಲ’ ಎಂಬ ಸಿದ್ಧ ಉತ್ತರ ಸಿಗುತ್ತಿದೆ. ಕೆಲವೆಡೆ ಮನೆ ಖಾಲಿ ಮಾಡಿಸುತ್ತಿದ್ದಾರೆ.
ಇನ್ನು ಹಲವೆಡೆ “ನೆಗೆಟಿವ್ ವರದಿ ತೋರಿಸಿ ಒಳಗೆ ಬನ್ನಿ ಎಂದು ಷರತ್ತು ವಿಧಿಸಲಾಗುತ್ತಿದೆ. ಇದು ಪರೋಕ್ಷವಾಗಿ ವ್ಯಕ್ತಿಯ ಆತ್ಮಸ್ಥೆöÊರ್ಯ ಕುಂದಿಸುತ್ತಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಜತೆಗೆ ಗುಣಮುಖರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಆದರೆ, ಸೋಂಕು ಮುಕ್ತರಾದರೂ ಜನಕ್ಕೆ ನೆಮ್ಮದಿ ಸಿಗುತ್ತಿಲ್ಲ. ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗುವಾಗ ಮನೆ ಖಾಲಿ ಮಾಡಿ, ಇಲ್ಲಿ ಬರಬೇಡಿ ಹಾಗೂ ಕೋವಿಡ್ ಪಾಸಿಟಿವ್ ಇಲ್ಲ ಎನ್ನುವ ವರದಿ ತೋರಿಸಿ ಎಂದು ಮನೆ ಮಾಲೀಕರು ಒತ್ತಡ ಹೇರಲು ಪ್ರಾರಂಭಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.