ಬೆಂಗಳೂರು: ಪಾದರಾಯನಪುರ ಕೊರೊನಾ ಸೋಂಕಿತ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದ್ದು ಸರಿಯಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜೈಲಿನಲ್ಲಿ 177 ಖೈದಿಗಳಿದ್ದರು. ಪಾದರಾಯನಪುರ ಸೋಂಕಿತರಿಗಾಗಿ ಖೈದಿಗಳನ್ನು ಜೈಲಿನಿಂದ ಸ್ಥಳಾಂತರ ಮಾಡಿಸಿದ್ದಾರೆ. ಪಾದರಾಯನಪುರ ಬಂಧಿತರನ್ನು ರಾಮನಗರದಲ್ಲಿ ಕ್ವಾರಂಟೈನ್ ಮಾಡಿದ್ದೇಕೆ?. ರಾಮನಗರ ಗ್ರೀನ್ ಝೋನ್ ನಲ್ಲಿದೆ. ಆದ್ದರಿಂದ ಇಲ್ಲಿಗೆ ಸ್ಥಳಾಂತರ ಬೇಡ ಎಂದು ಹೇಳಿದ್ದೆವು. ಆದರೂ ಸಹ ಬಿಜೆಪಿಯವರು ಉದ್ದೇಶಪೂರ್ವಕವಾಗಿ ರಾಮನಗರ ಜಿಲ್ಲೆಗೆ ಸೋಂಕು ಅಂಟಿಸುವ ಕೆಲಸ ಮಾಡುತ್ತಿದ್ದಾರೆ. ರಾಮನಗರ ಜೈಲಿಗೆ ತಂದು ಹಾಕಿರುವವರಲ್ಲಿ ಈಗ ಪಾಸಿಟೀವ್ ಬಂದಿದೆ. ಗ್ರೀನ್ ಜೋನ್ ಅನ್ನು ರೆಡ್ ಝೋನ್ ಮಾಡುತ್ತಿದ್ದಾರೆ. ರಾಮನಗರದಿಂದ ಸೋಂಕಿತರನ್ನು ಬೇರೆಡೆ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಮನವಿ ಬಂದಿದೆ ಎನ್ನುತ್ತಿದೆ. ಆರೋಪಿಗಳನ್ನು ಬರೀ ಸ್ಥಳಾಂತರ ಮಾಡಿದಷ್ಟೇ ಸಾಲದು. ಜೈಲಿನ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಬೇಕು ಎಂದು ಹೇಳಿದರು