ಚಂದ್ರಕಾಂತ ಕರದಳ್ಳಿ ಮಕ್ಕಳ ಸಾಹಿತ್ಯದಲ್ಲಿ ಮತ್ತು ಕನ್ನಡಪರ ಸಂಘಟನೆಯಲ್ಲಿ ಗಣನೀಯ ಸಾಧನೆ ಮಾಡಿದವರು.ಚಂದ್ರಕಾಂತ ಕರದಳ್ಳಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. ಅವರು 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ.
ಚಂದ್ರಕಾಂತ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು.
ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಚಂದ್ರಕಾಂತ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿತ್ತು. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಿಸು ಸಂಗಮೇಶ ದತ್ತಿನಿಧಿ ಪ್ರಶಸ್ತಿ ದೊರೆತಿತ್ತು. ನಲವತ್ತಕ್ಕೂ ಕೃತಿಗಳನ್ನು ಪ್ರಕಟಿಸಿದ ಕರದಳ್ಳಿ ಅವರ ‘ಕಾಡು ಕನಸಿನ ಬೀಡಿಗೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಬಾಲಸಾಹಿತ್ಯ ಪುರಸ್ಕಾರ ಸಂದಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿತ್ತು.
ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದ ಚಂದ್ರಕಾಂತರು ವಿಶ್ವನಾಥರೆಡ್ಡಿ ಮುದ್ನಾಳರ ವಿಶ್ವಕಲ್ಯಾಣ ಪತ್ರಿಕೆಯಲ್ಲಿ ಕಂಪೋಜಿಟರ್ ಆಗಿ ಕೆಲಸ ಮಾಡಿದ್ದರು. ಅದಕ್ಕೂ ಮೊದಲು ಸಂತೆಯಲ್ಲಿ ಜೋಳ ಮಾರಿದ್ದ ಸಂಗತಿಗಳನ್ನು ಅವರು ಎಂದೂ ಮರೆಯಲಿಲ್ಲ. ಹಿಂದಿನದನ್ನು ನೆನೆಯುತ್ತ ಮುಂದಿನ ಜೀವನವನ್ನು ಮೌಲ್ಯಗಳ ಎತರಕ್ಕೆ ಏರಿಸಿಕೊಂಡಿದ್ದರು.
ಸಾಹಿತಿ ಮತ್ತು ಪತ್ರಕರ್ತರಾಗಿ ಹೆಸರಾಗಿದ್ದ ಲಿಂಗಣ್ಣ ಸತ್ಯಂಪೇಟೆಯವರ ಗರಡಿಯಲ್ಲಿ ಪೆರಿಯಾರ ವಿಚಾರ ಸಂಘವನ್ನು ಆರೋಗ್ಯಪೂರ್ಣವಾಗಿ ನಡೆಸಲು ಚಂದ್ರಕಾಂತರು ಸಹಕಾರ ನೀಡಿದ್ದರು.
ಸತ್ಯಂಪೇಟೆಯವರ ಒಡನಾಟದಲ್ಲಿ ಇಡೀ ರಾಜ್ಯದ ತುಂಬೆಲ್ಲ ಓಡಾಡಿ ಸಾಹಿತ್ಯದ ಸೊಬಗನ್ನು ಸವಿದಿದ್ದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಶಹಾಪುರದಲ್ಲಿ ಕಟ್ಟಿ ನಿಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಚಂದ್ರಕಾಂತ ಕರದಳ್ಳಿ ಅವರು 2019ರ ಡಿಸೆಂಬರ್ 19ರಂದು ಈ ಲೋಕವನ್ನಗಲಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: