ಬೆಂಗಳೂರು, ಮಾ.18: ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಡಿ ಕಳೆದ ಮೂರು ವರ್ಷಗಳಲ್ಲಿ 660 ಕೋಟಿ ರೂ. ದಂಡ ಶುಲ್ಕ ಸಂಗ್ರಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಈ ಪ್ರಕರಣಗಳಿಂದ ಕಳೆದ ಮೂರು ವರ್ಷದಲ್ಲಿ ಸಂಗ್ರಹಿಸಲಾದ ದಂಡ ಮೊತ್ತವು 660 ಕೋಟಿ 97 ಲಕ್ಷದ 96,854 (660,97,96,854 ರೂ.) ರೂಪಾಯಿಯಾಗಿದೆ ಎಂದು ಗೃಹಸಚಿವರು ಉತ್ತರಿಸಿದ್ದಾರೆ.ದಂಡ ವಸೂಲಿಯಾದ ಮೊತ್ತವನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವರು, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಪ್ರಕರಣಗಳಿಂದ ಸಂಗ್ರಹಿಸಲಾದ ಸ್ಥಳದಂಡ ಮೊತ್ತವನ್ನು ಸರ್ಕಾರದ ಖಜಾನೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಸಂಚಾರ ಸುಧಾರಣೆಗಾಗಿ ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು, ಬಿಡುಗಡೆ ಮಾಡುವ ಸದರಿ ಅನುದಾನದಲ್ಲಿ ಈ ಕೆಳಕಂಡ ಯೋಜನೆಯ ಉದ್ದೇಶಗಳಿಗಾಗಿ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.ಪೊಲೀಸ್ ಇಲಾಖೆಯ ಔರಾದ್ಕರ್ ವರದಿಯು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆಯೇ? ಎಂಬ ಪ್ರಶ್ನೆಗೆ, ರಾಘವೇಂದ್ರ ಔರಾದರ್ ವರದಿಯ ಶಿಫಾರಸ್ಸುಗಳನ್ನು ಭಾಗಶಃ ಅಂಗೀಕರಿಸಿರುವ ರಾಜ್ಯ ಸರ್ಕಾರವು ಅನುಯಾಯಿ, ಜಮೇದಾರ್ ಅನುಯಾಯಿ, ಪಿ.ಎಸ್.ಐ ಹಾಗೂ ಪೊಲೀಸ್ ಉಪಾಧೀಕ್ಷಕರುಗಳ ವೇತನ ಶ್ರೇಣಿಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವೃಂದದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ವೇತನ ಶ್ರೇಣಿಗಳನ್ನು ಪರಿಷ್ಕರಣೆ ಮಾಡಿರುತ್ತದೆ.ಅಧಿಕಾರಿ ಮತ್ತು ಸಿಬ್ಬಂದಿಯವರ ಭತ್ಯೆಗಳ ಪರಿಷ್ಕರಣೆಗೆ ಮಾಡಿದ್ದ ಶಿಫಾರಸ್ಸುಗಳಲ್ಲಿ ಗಂಡಾಂತರ ಭತ್ಯೆ, ಶ್ರಮದಾನ ಭತ್ಯೆ ಹಾಗೂ ಸದೃಢ ಭತ್ಯೆಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಭತ್ಯೆಗಳನ್ನು ಪರಿಷ್ಕರಣೆ ಮಾಡಲಾಗಿರುತ್ತದೆ. ರಾಘವೇಂದ್ರ ಔರಾದರ್ ಸಮಿತಿಯ ವರದಿಯು ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ್ದಾಗಿದ್ದು, ಈ ವರದಿಯಿಂದ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮುಂಬಡ್ತಿಯಿಂದ ವಂಚಿತರಾಗಿರುವುದಿಲ್ಲ. ಪೊಲೀಸ್ ಇಲಾಖೆಯಲ್ಲಿ ಕಾಲ-ಕಾಲಕ್ಕೆ ಉಂಟಾಗುವ ರಿಕ್ತವಾಗುವ ಹುದ್ದೆಗಳನ್ನು ಮುಂಚಿತವಾಗಿಯೇ ಪರಿಗಣನೆಗೆ ತೆಗೆದುಕೊಂಡು ಅರ್ಹ ಅಧಿಕಾರಿ/ಸಿಬ್ಬಂದಿಯವರಿಗೆ ಪದೋನ್ನತಿ ನೀಡಲು ಈಗಾಗಲೇ ಕ್ರಮ ವಹಿಸಲಾಗುತ್ತಿದೆ ಎಂದು ಗೃಹ ಸಚಿವರು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: