ಚಂಡೀಗಢ: ಪಂಜಾಬ್ನ ಕಾಂಗ್ರೆಸ್ನಲ್ಲಿ ಈಗ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಚುನಾವಣೆಯ ಹೊಸ್ತಿನಲ್ಲಿಯೇ ಕೈ ನಾಯಕ ನವಜೋತ್ ಸಿಧು ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಚುನಾವಣೆ ಸಮಯದಲ್ಲಿ ಆರೋಪ- ಪ್ರತ್ಯಾರೋಪ ಹೊಸತಲ್ಲ. ಆದರೆ ಇದೀಗ ಖುದ್ದು ಸಿಧು ಅವರ ಸಹೋದರಿಯೇ ಈ ಆರೋಪ ಮಾಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಿಧು ಅವರ ಸಹೋದರಿ ಸುಮನ್ ತೂರ್ ಅವರು ಈ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸಹೋದರ ನವಜೋತ್ ಸಿಧು ಮಹಾಕ್ರೂರಿ. 1986ರಲ್ಲಿ ನಮ್ಮ ತಂದೆ ಮೃತಪಟ್ಟರು. ಅದಾದ ಬಳಿಕ ನನ್ನ ಅಕ್ಕ ಹಾಗೂ ತಾಯಿಯನ್ನು ಆತ ಯಾವುದೇ ಕರುಣೆ ತೋರದೆ ಮನೆಯಿಂದ ಹೊರಹಾಕಿದ. ಇದರಿಂದ ಅಮ್ಮ ತುಂಬಾ ನೊಂದುಕೊಂಡರು. ಅವರು ಕುಗ್ಗಿ ಹೋಗಿದ್ದರು. 1989ರಲ್ಲಿ ರೈಲ್ವೆ ನಿಲ್ದಾಣದಲ್ಲಿ ನಿರ್ಗತಿಕರಾಗಿ ಅವರು ಮೃತಪಟ್ಟರು. ಅಕ್ಕ ಕೂಡ ತೀರಿಕೊಂಡಳು. ಅಪ್ಪನ ಅಸ್ತಿಯನ್ನು ತಾನೊಬ್ಬನೇ ಅನುಭವಿಸುವ ಹಪಾಹಪಿತನದಿಂದ ಈ ರೀತಿ ಮಾಡಿದ್ದಾನೆ ಅವನು. ನಮ್ಮೆಲ್ಲರನ್ನೂ ಹೊರಕ್ಕೆ ಹಾಕಿ ಆಸ್ತಿ ಕಬಳಿಸಿ ನಮ್ಮ ಜತೆಗಿನ ಸಂಪರ್ಕ ಕಡಿದುಕೊಂಡಿದ್ದಾನೆ ಎಂದು ಸುಮನ್ ತಿಳಿಸಿದ್ದಾರೆ.
ಅಂದಹಾಗೆ ಈ ಸುಮನ್ ಅವರು ಸಿಧು ಅವರ ತಂದೆಯ ಮೊದಲ ಪತ್ನಿ ನಿರ್ಮಲ್ ಭಗವಂತ್ ಅವರ ಮಕ್ಕಳು. ಇವರು ಹುಟ್ಟಿದ ಮೇಲೆ ಸಿಧು ಅವರ ತಂದೆ ಮತ್ತೊಂದು ಮದುವೆಯಾಗಿದ್ದು, ಆ ಜೋಡಿಗೆ ಹುಟ್ಟಿದ ಮಗ ಸಿಧು.
ಸುಮನ್ ಅವರ ಆರೋಪದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಧು ಅವರ ಪತ್ನಿ ನವಜೋತ್ ಕೌರ್, ಸಿಧು ಅವರ ತಂದೆಯ ಮೊದಲ ಪತ್ನಿಗೆ ಇಬ್ಬರು ಮಕ್ಕಳು ಇರುವುದು ಗೊತ್ತು. ಆದರೆ ಸುಮನ್ ಅವರ ಬಗ್ಗೆ ನನಗೆ ತಿಳಿದಿಲ್ಲ ಎಂದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada