ಶಿವಮೊಗ್ಗ, ಫೆ.25: ‘ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಅದು ನನ್ನ ತವರು ಮನೆ. ನಾನಿರುವುದು ಅಲ್ಲಿಯೇ’ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.
ಶನಿವಾರ ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ”ವಿಧಾನ ಪರಿಷತ್ಗೆ ಯಾವ ಪಕ್ಷದಿಂದಲೂ ನನ್ನನ್ನು ನೇಮಕ ಮಾಡಿಲ್ಲ.
ಬದಲಾಗಿ ಸಾಹಿತ್ಯ ಕೃತಿಗಳನ್ನು ಬರೆದಿರುವುದರಿಂದ ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಕೋಲಾರಕ್ಕೂ ಹೋಗುತ್ತೇನೆ” ಎಂದರು.
”ಹಣದ ಹಿಂದೆ ಹೋಗುವ ರಾಜಕಾರಣಿ ನಾನಲ್ಲ”
‘ಈಗಿನ ರಾಜಕಾರಣ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾತ್ರ ಸಾಧ್ಯವಾಗುತ್ತದೆ. ಪಾರ್ಟಿಗೆ ಅರ್ಜಿ ಹಾಕಿದವರನ್ನು ಆಕಾಂಕ್ಷಿಗಳು ಎನ್ನುವುದಕ್ಕಿಂತ ಗಿರಾಕಿಗಳು ಎಂದು ನೋಡುವಂತಾಗಿದೆ. ಯಾವ ಗಿರಾಕಿ ಹೆಚ್ಚು ಬಂಡವಾಳ ಹೊಂದಿದ್ದಾನೊ ಅವನಿಗೆ ಟಿಕೆಟ್ ಸಿಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿಯವರು ಮಠಾಧೀಶರಿಗೆ ಟಿಕೆಟ್ ನೀಡಲು ಹೊರಟಿದ್ದಾರೆ’ ಎಂದರು.
‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಹಣ ಪಡೆದಿದ್ದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಟೀಕಿಸುವ ನೈತಿಕತೆ ನನಗಿರುತ್ತಿರಲಿಲ್ಲ. ಜನ ಬೇಕಾದ ರೀತಿ ಅರ್ಥೈಸುತ್ತಿದಾರೆ. ಆದರೆ ಹಣದ ಹಿಂದೆ ಹೋಗುವ ರಾಜಕಾರಣಿ ನಾನಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada