ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ನಿರ್ಮಾಣ ಇಲಾಖೆಯ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಪಡೆದು ಏಜೆಂಟರ್ ಮೂಲಕ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಕೊಲ್ಹಾರದ ಪುನರ್ವಸತಿ ಕೆಂದ್ರದಲ್ಲಿ ಹಣದಾಸೆಗೆ ಅಕ್ರಮವಾಗಿ ಒಬ್ಬೊಬ್ಬರಿಗೆ ಹತ್ತಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಪಟ್ಡಣದ ಸಿಕ್ಯಾಬ್ ಶಾಲೆ ಪಕ್ಕದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಶೆಡ್ಗಳನ್ನು ಹಾಕಿಕೊಂಡು ವಾಸವಿರುವ ಜಾಗವನ್ನು ಯುಕೆಪಿಯ ಪುನರ್ವಸತಿ ಅಧಿಕಾರಿಗಳು ಅಳತೆ ಮಾಡಲು ಆಗಮಿಸಿದಾಗ ಅಲ್ಲಿನ ನಿವಾಸಿಗಳು ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಕೆಲವು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿ ಅದೇ ರೀತಿ ನಮ್ಮನ್ನು ತೆರವುಗೊಳಿಸುವ ಹುನ್ನಾರ ಮಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಜಾಗಗಳನ್ನು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಯುಕೆಪಿ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ನಿವೇಶನಗಳಿಗಾಗಿ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಸಹ ಎಲ್ಲರೂ ಕಟ್ಟಲು ಸಿದ್ದರಿದ್ದೇವೆ ಎಂದಿದ್ದಾರೆ.