ಹಾಸನ: ಪೊಲೀಸ್ ಇಲಾಖೆ ಬಳಸಿಕೊಂಡು ತುಮಕೂರಿಗೆ ನೀರು ಬಿಡುತ್ತಿದ್ದಾರೆ. ಆದರೆ ಮಂಡ್ಯ, ಹಾಸನ ಜಿಲ್ಲೆಗಳಿಗೆ ನೀರು ಬಿಡುತ್ತಿಲ್ಲ. ಬಿಡುವುದಾದರೆ ಮೂರು ಜಿಲ್ಲೆಗೂ ನೀರು ಬಿಡಲಿ. ಹಾಸನದಲ್ಲಿ ಕುಡಿಯೋಕೆ ನೀರಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಹಾಸನದಲ್ಲಿ ಮಾತನಾಡಿದ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ರನ್ನು ಇಟ್ಟುಕೊಂಡು ತುಮಕೂರಿಗೆ ನೀರು ಹರಿಸುತ್ತಿದ್ದಾರೆ. ಪೊಲೀಸ್ ರನ್ನು ಬಳಸಿಕೊಂಡು ಎಷ್ಟು ದಿನ ಹೀಗೆ ಮಾಡ್ತೀರಿ. ಏನಾದರು ಹೆಚ್ಚುಕಮ್ಮಿಯಾದರೆ ನಾನು ಹೊಣೆಯಲ್ಲ, ಜವಾಬ್ದಾರನಲ್ಲ. ಹಾಸನ, ಮಂಡ್ಯ, ತುಮಕೂರು ಜಿಲ್ಲೆಯ ಜನರು ಅಣ್ಣ- ತಮ್ಮಂದಿರಂತೆ ಇದ್ದೇವೆ. ಮೂರು ಜಿಲ್ಲೆಗೂ ನೀರು ಬಿಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು. ದೇವೇಗೌಡರ ಲೋಕಸಭೆ ಚುನಾವಣಾ ಸಮಯದಲ್ಲಿ ತುಮಕೂರಿಗೆ ನೀರು ಬಿಟ್ಟಿಲ್ಲಾ ಎನ್ನುತ್ತಿದ್ದರು. ನಾವೇನು ನೀರು ಬಿಡೋಕೆ ಅಡ್ಡಿಪಡಿಸಿದ್ವಾ ಎಂದು ಪ್ರಶ್ನಿಸಿ, ಹೇಮಾವತಿ ಜಲಾಶಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ನೀರು ಹರಿಸುತ್ತಿದ್ದಾರೆ. ತುಮಕೂರಿಗೆ 2 ಟಿಎಂಸಿ ನೀರು ಹರಿಸುತ್ತಿದ್ದಾರೆ. ಹೇಮಾವತಿ ಜಲಾಶಯದಲ್ಲಿ 14 ಟಿಎಂಸಿ ನೀರು ಇದೆ. ಜಲಾಶಯಕ್ಕೆ ಜಮೀನು ಕೊಟ್ಟ 48 ಮಂದಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ತುಮಕೂರು ನಾಲೆಯಲ್ಲಿ ಸಂಪೂರ್ಣವಾಗಿ ದೊಡ್ಡದೊಡ್ಡ ಮರಗಳು ಬೆಳೆದಿವೆ, ದೊಡ್ಡ ದೊಡ್ಡ ಕಲ್ಲುಗಳು ಬಿದ್ದಿವೆ. ತುಮಕೂರಿಗೆ ನೀರೇ ತಲುಪುತ್ತಿಲ್ಲಾ. ಆದರೂ ನೀರು ಬಿಟ್ಟಿದ್ದಾರೆ. ತುಮಕೂರು ಕಾಲುವೆ ದುರಸ್ತಿ ಮಾಡಿದ ಬಳಿಕ ನೀರು ಬಿಡಿ. ಈಗ ಸುಮ್ಮನೆ ನೀರು ಬಿಟ್ಟರೆ ಎಲ್ಲ ನೀರು ವ್ಯರ್ಥವಾಗಲಿದೆ. ಈ ಜಿಲ್ಲೆಯ ಜನರ ತಾಳ್ಮೆ ಕೆಟ್ಟರೆ ನಾವು ಜವಾಬ್ದಾರಿಯಲ್ಲಾ ಎಂದು ಎಚ್ಚರಿಕೆ ನೀಡಿದರು.ಹೇಮಾವತಿ ಚೀಫ್ ಇಂಜಿನಿಯರ್ ಕೇಳಿದರೆ ನಮಗೆ ಯಾವುದೇ ಆದೇಶ ಬಂದಿಲ್ಲಾ ಅಂತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮೌಖಿಕವಾಗಿ ಹೇಳಿದ್ದಾರೆ ನೀರು ಬಿಡಿ ಅಂತಾ ಹೇಳುತ್ತಿದ್ದಾರೆ. ಮೂರು ಜಿಲ್ಲೆಯ ರೈತರಿಗೆ ನೀರು ಕೊಡಿ, ಬೇಕಿದ್ದರೆ ತುಮಕೂರಿಗೆ ಹೆಚ್ಚು ನೀರು ಹರಿಸಿ. ಏನಾದರು ಹೆಚ್ಚು ಕಡಿಮೆಯಾದ್ರೆ ಜಿಲ್ಲಾಧಿಕಾರಿಯೇ ಹೊಣೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಬಳಸಿಕೊಂಡು ತುಮಕೂರಿಗೆ ನೀರು ಬಿಡುತ್ತಿದ್ದಾರೆ:ಹೆಚ್.ಡಿ. ರೇವಣ್ಣ
Please follow and like us: