ಪ್ರೇಯಸಿಯನ್ನು ಕತ್ತು ಹಿಸುಕಿ ಕೊಲೆಗೈದು ಆಕೆಯ ಶವವನ್ನು ಫ್ರಿಡ್ಜ್ ನಲ್ಲಿಟ್ಟು ಕೆಲವೇ ಗಂಟೆಗಳಲ್ಲಿ ಮದುವೆಯಾದ ಪ್ರಿಯಕರನ್ನು ದೆಹಲಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಜಧಾನಿಯಲ್ಲಿ ಮತ್ತೊಂದು ಅಂತಹದೇ ಘಟನೆ ನಡೆದಿದೆ.
ದೆಹಲಿಯ ನಜಾಫ್ಗಢ್ನ ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ಢಾಬಾದಲ್ಲಿ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಗೆಳತಿ ನಿಕ್ಕಿ ಯಾದವ್ (22) ಎಂಬಾಕೆ ಹತ್ಯೆ ಆಗಿದ್ದಾಳೆ. ಸಾಹಿಲ್ ಗೆಹ್ಲೋಟ್ (24) ಕೊಲೆ ಮಾಡಿದ್ದಾನೆ.
ಫೆ. 9ರ ಮಧ್ಯರಾತ್ರಿ ಕಾಶ್ಮೀರಿ ಗೇಟ್ ಐಎಸ್ಬಿಟಿ ಬಳಿ ನಿಕ್ಕಿ ಯಾದವ್ ಗಳನ್ನು ಕಾರಿನಲ್ಲಿ ಕತ್ತು ಹಿಸುಕಿ ಕೊಂದ ಸಾಹಿಲ್ ಗೆಹ್ಲೋಟ್ ತನ್ನ ಢಾಬಾದ ಫ್ರಿಡ್ಜ್ನಲ್ಲಿ ಶವವನ್ನು ಬಚ್ಚಿಟ್ಟಿದ್ದ. ಅಷ್ಟೇ ಅಲ್ಲದೇ ಕೃತ್ಯ ಎಸಗಿ ಕೆಲವೇ ಗಂಟೆಯಲ್ಲಿ ಬೇರೊಂದು ಯುವತಿಯ ಜೊತೆ ಮದುವೆ ಆಗಿರುವ ವಿಷಯ ಬೆಳಕಿಗೆ ಬಂದಿದೆ.
ಮಿತ್ರಾನ್ ಗ್ರಾಮದ ನಿವಾಸಿ ಸಾಹಿಲ್ ಹರಿಯಾಣದ ಜಜ್ಜರ್ ನಿವಾಸಿ ನಿಕ್ಕಿಯನ್ನು 2018ರಲ್ಲಿ ಉತ್ತಮ ನಗರ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದ್ದಾಗ ಭೇಟಿಯಾಗಿದ್ದ. ನಂತರ ಇವರಿಬ್ಬರು ನೋಯ್ಡಾದ ಒಂದೇ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಅಲ್ಲಿಂದ ಸ್ನೇಹಿತರಾಗಿದ್ದರು. ಈ ಸ್ನೇಹವೇ ಲೀವ್ ಇನ್ ರಿಲೇಶನ್ಶಿಪ್ನಲ್ಲಿ ಇರಲು ಆರಂಭಿಸಿದರು.
ಇಬ್ಬರು ನೋಯ್ಡಾದಲ್ಲಿ ಬಾಡಿಗೆ ಮನೆಯನ್ನು ಪಡೆದು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಆದರೆ ಸಾಹಿಲ್ ತನ್ನ ಸಂಬಂಧದ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಹಿಲ್ ಕುಟುಂಬದವರು ನಿಶ್ಚಯಿಸಿದ ಯುವತಿಯ ಜೊತೆಗೆ ಸಾಹಿಲ್ ಫೆ. 10ಕ್ಕೆ ಮದುವೆ ನಿರ್ಧಾರವಾಗಿತ್ತು.
ಈ ವಿಷಯ ತಿಳಿದ ನಿಕ್ಕಿ, ಸಾಹಿಲ್ ಜೊತೆ ಜಗಳವಾಡಿದ್ದಳು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಸಾಹಿಲ್ ನಿಕ್ಕಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು, ತನ್ನ ಮೊಬೈಲ್ನ ಡೇಟಾ ಕೇಬಲ್ ಅನ್ನು ಬಳಸಿ ತನ್ನ ಕಾರಿನಲ್ಲಿ ನಿಕ್ಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ನಿಕ್ಕಿಯನ್ನು ಕೊಂದ ನಂತರ ಸಾಹಿಲ್ ಆಕೆಯ ಶವವನ್ನು ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ಢಾಬಾದ ಫ್ರಿಡ್ಜ್ನಲ್ಲಿ ಬಚ್ಚಿಟ್ಟು ವಿಕೃತಿಯನ್ನು ಮೆರೆದಿದ್ದಾನೆ. ಬಳಿಕ ಕೆಲವೇ ಗಂಟೆಯಲ್ಲಿ ಏನೂ ಆಗದ ರೀತಿಯಲ್ಲಿ ಹೋಗಿ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದ. ಆದರೆ ಮಂಗಳವಾರ ಢಾಬಾದ ಫ್ರಿಡ್ಜ್ನಲ್ಲಿ ನಿಕ್ಕಿಯ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈ ಹಿನ್ನೆಲೆಯಲ್ಲಿ ಸಾಹಿಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada