ಮಹಾಮಾರಿ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ 1.20 ಲಕ್ಷ ಕುಟುಂಬಗಳಿಗೆ ಅನ್ನಂ ಪರಬ್ರಹ್ಮ ದಿನಸಿ ಕಿಟ್ ನೀಡುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾಂಕೇತಿಕ ಚಾಲನೆ ನೀಡಿದರು. ರಾಮನಗರದ ಬಡಕುಟುಂಬಗಳಿಗೆ ಕುಮಾರಸ್ವಾಮಿ ಹಾಗೂ ಕುಟುಂಬ ಸದಸ್ಯರು ಆಹಾರ ಕಿಟ್ ವಿತರಣೆ ಮಾಡಿದರು. ಈ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ನಿಖಿಲ್ ಹೆಂಡತಿ ರೇವತಿ ಕೂಡ ಭಾಗಿಯಾಗಿದ್ದರು. ಬಳಿಕ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ರಾಮನಗರ – ಚನ್ನಪಟ್ಟಣ ಕ್ಷೇತ್ರಗಳಿಗೆ 60 ಸಾವಿರ ಜನರಿಗೆ ಫುಡ್ ಕಿಟ್ ಕೊಡಲು ತೀರ್ಮಾನಿಸಿದ್ದೆವು. ಈಗ ಎರಡೂ ಕ್ಷೇತ್ರದಿಂದ 1.20 ಲಕ್ಷ ಕುಟುಂಬಗಳಿಗೆ ಫುಡ್ ಕಿಟ್ ಕೊಡುತ್ತಿದ್ದೇವೆ. ರಾಮನಗರದಲ್ಲೇ ಮಗನ ಮದುವೆ ಮಾಡಬೇಕಿತ್ತು. ಕೊರೋನಾದಿಂದಾಗಿ ಮಾಡಲಾಗಲಿಲ್ಲ. ಹಾಗಾಗಿ ಇವತ್ತು 5.50 ಕೋಟಿ ವೆಚ್ಚದಲ್ಲಿ ರಾಮನಗರ – ಚನ್ನಪಟ್ಟಣ ಜನರಿಗೆ ಫುಡ್ ಕಿಟ್ ಕೊಡುತ್ತಿದ್ದೇವೆ. ಮುಂದೆ ಎರಡೂ ಕ್ಷೇತ್ರದ ಪ್ರತಿ ಮನೆಗೂ ಕೂಪನ್ ಕೊಟ್ಟು ಫುಡ್ ಕಿಟ್ ಕೊಡಲಾಗುವುದು. ಮಗನ ಮದುವೆ ಸಮಾರಂಭದ ಹಣವನ್ನು ಜನರಿಗಾಗಿ ಖರ್ಚು ಮಾಡುತ್ತಿದ್ದೇನೆ. ಎಂದು ಹೇಳಿದರು.