ಬೆಂಗಳೂರು ಫೆಬ್ರವರಿ 10: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿ ಮೇಲೆ ಶುಕ್ರವಾರ ಮಧ್ಯಾಹ್ನ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ವೈಯಾಲಿಕಾವಲ್ನಲ್ಲಿರುವ ಬಿಡಿಎ ಕಚೇರಿ ಮೇಲೆ 35 ಲೋಕಾಯುಕ್ತಾ ಅಧಿಕಾರಿಗಳು ಕಚೇರಿ ನಾಲ್ಕು ಕಡೆಯಿಂದ ದಾಳಿ ಮಾಡಿ ಶೋಧ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಅಶೋಕ್ ಅವರ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತಂಡದಲ್ಲಿ 6 ತಂಡಗಳು ಇದ್ದವು ಎನ್ನಲಾಗಿದೆ.
ಬಿಡಿಎ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದು, ಕಚೇರಿಯಲ್ಲಿ ನಡೆದಿರುವ ಅನೇಕ ಅಕ್ರಮಗಳ ಕುರಿತು ಶೋಧ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಕಚೇರಿಯ 4 ಬಾಗಿಲುಗಳನ್ನು ಮುಚ್ಚಿಕೊಂಡು ಅಧಿಕಾರಿಗಳು ತನಿಖೆ ನಡೆಸಿದರು ಎಂದು ವರದಿಗಳು ತಿಳಿಸಿದೆ.
ತನಿಖೆ ವೇಳೆ ಕಚೇರಿ ಗೇಟ್ ಮುಚ್ಚಿದ್ದರಿಂದ ನೂರಾರು ಸಾರ್ವಜನಿಕರು ಗಲಿಬಿಲಿಗೊಂಡರು. ಬಳಿಕ ಶೋಧ ನಡೆಯುತ್ತಿದೆ ಎಂದು ತಿಳಿದು ಗೇಟ್ ಮುಂದೆ ನಿಂತು ಕುತೂಹಲದಿಂದ ನೋಡುತ್ತಿದ್ದರು. ಬಳಿಕ ಕೆಲವರು ಶೋಧ ಮುಂದುವರಿಯುವ ಅಂದಾಜಿನಿಂದ ಮನೆ ಕಡೆ ತೆರಳಿದರು. ಬಿಡಿಎ ಸಂಸ್ಥೆ ಮೇಲೆ ಅನೇಕ ಅಕ್ರಮಗಳ ಆರೋಪ ಮೊದಲಿನಿಂದಲೂ ಇದ್ದೇ ಇದೆ. ಹಾಗಾಗಿ ಈಗ ಲೋಕಾಯಕ್ತ ದಾಳಿ ಮಾಡಿರುವುದು ಹೊಸ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೂಲೆ ನಿವೇಶನ (ಕಾರ್ನರ್ ಸೈಟ್) ಹಂಚಿಕೆ ಹಾಗೂ ಬಡಾವಣೆ ನಿರ್ಮಾಣ ಪ್ರಕ್ರಿಯೆಯಲ್ಲಿ ಬಿಡಿಎ ವಿರುದ್ಧ ಸಾಕಷ್ಟು ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿತ್ತು. ಬಿಡಿಎಯಿಂದ ಪರಿಹಾರ ನೀಡುವಲ್ಲಿಯೂ ವ್ಯಾಪಕ ಭ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಬಿಡಿಎ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.
ಬಿಡಿಎ ಮೇಲೆ ದಾಳಿ, ಶೋಧಗಳು ಇದೇ ಮೊದಲಲ್ಲ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆರೋಪಗಳಿಗೆ ಗುರಿಯಾಗಿರುವ ಬಿಡಿಎ ವಿರುದ್ಧ ಹಿಂದೆಯೂ ದಾಳಿಗಳು ನಡೆದಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada