ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿರುವ ಸರಣಿ ಲಾಕ್ಡೌನ್ ವಿಫಲವಾಗಿದೆ ಎಂದು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ರಾಜೀವ್ ಬಜಾಜ್, ಲಾಕ್ಡೌನ್ ಹೇರಿಕೆ ಕೊರೊನಾ ವೈರಸ್ನ್ನು ನಿಯಂತ್ರಿಸುವ ಬದಲು ದೇಶದ ಅರ್ಥ ವ್ಯವಸ್ಥೆಯನ್ನು ಬಲಹೀನಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಲಾಕ್ಡೌನ್ನಿಂದ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ. ಭಾರತದ ಉತ್ಪಾದನಾ ವಲಯದ ಬಲ ಕುಂದಿದ್ದು, ಇದು ಮತ್ತೆ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಲಿದೆ ಎಂದು ರಾಜೀವ್ ಬಜಾಜ್ ಅಂದಾಜಿಸಿದ್ದಾರೆ.
ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿ ಜಪಾನ್ ಮತ್ತು ಸ್ವಿಡನ್ ದೇಶಗಳು ಲಾಕ್ಡೌನ್ ಹೇರಿರಲಿಲ್ಲ. ಆದರೆ ದೇಶದ ಆರ್ಥಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡೇ ವೈರಸ್ನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತಂದವು ಎಂದು ರಾಜೀವ್ ಮಾಹಿತಿ ನೀಡಿದರು. ಇನ್ನು ರಾಜೀವ್ ಬಜಾಜ್ ಅಭಿಪ್ರಾಯವನ್ನು ಬೆಂಬಲಿಸಿ ಮಾತನಾಡಿದ ರಾಹುಲ್ ಗಾಂಧಿ, ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲೂ ಜಗತ್ತಿನ ಎಲ್ಲಾ ರಾಷ್ಟ್ರಗಳು ಸಂಪೂರ್ಣ ಲಾಕ್ಡೌನ್ ಹೇರಿರಲಿಲ್ಲ ಎಂದು ಹೇಳಿದ್ದಾರೆ.
ದೇಶದ ಉತ್ಪದನಾ ವಲಯ, ಕೃಷಿ ವಲಯ ಪಾತಾಳಕ್ಕೆ ಕುಸಿದಿದ್ದು, ಕೇವಲ ವಿಶೇಷ ಆರ್ಥಿಕ ಪ್ಯಾಕೇಜ್ನಿಂದ ಏನೂ ಸಾಧಿಸಲಾಗದು ಎಂದು ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದಾಗ ಲಾಕ್ಡೌನ್ ಹೇರಿ, ಕೊರೊನಾ ವೈರಸ್ ಆರ್ಭಟ ಜೋರಾಗಿರುವಾಗ ಲಾಕ್ಡೌನ್ ತೆರವುಗೊಳಿಸಿದ ವಿಶ್ವದ ಏಕೈಕ ದೇಶ ಭಾರತ ಎಂದೂ ರಾಹುಲ್ ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.