ಲಾಕ್ಡೌನ್ ಮಾಡುವುದರಿಂದ ಕೊರೊನಾ ನಿಯಂತ್ರಣ ಆಗುವುದಿಲ್ಲ. ಹೀಗಾಗಿ ಲಾಕ್ಡೌನ್ ಮುಂದುವರಿಸುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸಿಎಂ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಹೇಳುತ್ತಿದ್ದೇನೆ. ಲಾಕ್ಡೌನ್ ಮುಂದುವರಿಸಲ್ಲ, ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಒಂದೇ ಮಾರ್ಗ ಅಲ್ಲ. ಮತ್ತೆ ಮತ್ತೆ ಲಾಕ್ಡೌನ್ ಮಾಡಲು ಆಗುವುದಿಲ್ಲ. ಒಂದು ವಾರ ಲಾಕ್ಡೌನ್ ಮುಗಿಯುತ್ತಿದ್ದಂತೆ ಎಂದಿನಂತೆ ಎಲ್ಲ ಕೆಲಸಗಳು ಆರಂಭವಾಗುತ್ತದೆ ಎಂದು ಹೇಳಿದರು. ಖಾಸಗಿ ಆಸ್ಪತ್ರೆಗಳು ಸೇರಿಸಿಕೊಳ್ಳದ ಕಾರಣ ಒಂದು ತಿಂಗಳ ಮಗು ಅಮಾನವೀಯವಾಗಿ ಅಸುನೀಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸೂಚನೆಯನ್ನು ಕೊಡಲು ಮುಖ್ಯಕಾರ್ಯದರ್ಶಿಗೆ ಹೇಳಿದ್ದೇವೆ. ಈ ರೀತಿಯ ಪ್ರಕರಣಗಳು ಮರುಕಳಿಸದ ರೀತಿ ಎಚ್ಚರಿಕೆ ವಹಿಸುತ್ತೇವೆ ಎಂದರು.