ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ವಿಜಯಪುರ, ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ ಇಲ್ಲಿ ವಿಮಾನ ಹಾರಾಟ ನಡೆಸುವ ಮಹಾದಾಸೆ ಇದ್ದು, ಅದನ್ನು ಈಡೇರಿಸಲು ಸರ್ವ ಪ್ರಯತ್ನ ನಡೆಸುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ವಿಜಯಪುರ ಹೊರ ವಲಯದ ಬುರಣಾಪುರ- ಮದಭಾವಿ ಗ್ರಾಮದ ಜಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಜತೆ ಜಿಲ್ಲೆಯ ಅಭಿವೃದ್ಧಿಯಾಗಬೇಕಾಗಿದೆ. ವಿಮಾನ ನಿಲ್ದಾಣ ಜಿಲ್ಲೆಗೆ ಅತ್ಯವಶ್ಯ ವಾಗಿದೆ. ಈ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣ ಗೊಳಿಸಲು 15-20 ದಿನಕ್ಕೊಮ್ಮೆ ಕಾಮಗಾರಿ ವೀಕ್ಷಣೆಗೆ ಖುದ್ದು ಆಗಮಿಸುವುದಾಗಿ ಹೇಳಿದರು.
ವಿಮಾನ ನಿಲ್ದಾಣ ಕಾಮಗಾರಿಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಲೋಕೋಪಯೋಗಿಯಿಂದ ಕಾಮಗಾರಿ ಗುತ್ತಿಗೆಗೆ ಟೆಂಡರ್ ಕರೆಯಲಾಗಿದೆ. ಸೆಪ್ಟೆಂಬರ್ 29 ರೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಳ್ಳಲಿದ್ದು ಇನ್ನೇರಡು ತಿಂಗಳಲ್ಲಿ ಸಿಎಂ ಯಡಿಯೂರಪ್ಪ ಅವರಿಂದ ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆ ನೇರವೇರಿ ಸಲಾಗುವದು ಎಂದರು. ವಿಮಾನ ನಿಲ್ದಾಣ ಕಾಮಗಾರಿಯ ಮೊದಲು ಹಂತದ ಯೋಜನೆಗೆ 95 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ಎರಡು ಹಂತದ ಯೋಜನೆ ಮೂಲಕ ಕಾಮಗಾರಿ ಪೂರ್ಣ ಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.