ನವದೆಹಲಿ: ವಿಶ್ವವಿಖ್ಯಾತ ಕ್ರಿಕೆಟ್ ಆಟಗಾರ, ವಿಶ್ವಕಪ್ ಗೆದ್ದ ಭಾರತೀಯ ತಂಡದ ಕ್ಯಾಪ್ಟನ್. ಹಾಗಿದ್ದ ಮೇಲೆ ಜೀವನದಲ್ಲಿ ಕ್ರಿಕೆಟ್ ಬಿಟ್ಟು ಬೇರೇನೂ ಇರಬಾರದೇ? ಹಾಗೇನಿಲ್ಲ, ಕ್ರಿಕೆಟ್ ಬಿಟ್ಟು ಬೇರೆಯದ್ದಕ್ಕೂ ಪ್ರಾಧಾನ್ಯತೆ ಇದೆ ಎನ್ನುತ್ತಾರೆ ಕಪಿಲ್ ದೇವ್. ದೇಶಾದ್ಯಂತ್ ಲಾಕ್ಡೌನ್ ಜಾರಿಯಲ್ಲಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಸದ್ಯ ಕ್ರಿಕೆಟ್, ಫುಟ್ಬಾಲ್ಕ್ಕಿಂತ ಹೆಚ್ಚು ಮುಖ್ಯವಾಗಿರುವ ಸಂಗತಿಗಳೆಂದರೆ ಶಾಲೆ ಹಾಗೂ ಕಾಲೇಜುಗಳು. ಇವುಗಳ ಬಗ್ಗೆ ನಾವು ಗಮನ ಹರಿಸಬೇಕಿದೆ ಎಂದು ಅವರು ಹೇಳುತ್ತಾರೆ. ಬೇರೆಲ್ಲ ಸಂಗತಿಗಳನ್ನು ಬಿಟ್ಟು ಅಧಿಕಾರಿಗಳು ಕೂಡ ಇದೇ ವಿಷಯದ ಬಗ್ಗೆ ಹೆಚ್ಚು ಚಿಂತಿಸಬೇಕಿದೆ ಎನ್ನುವುದು ಕಪಿಲ್ ದೇವ್ ಆಭಿಪ್ರಾಯ.
ನಿಧಿ ಸಂಗ್ರಹಕ್ಕೆ ಭಾರತ- ಪಾಕಿಸ್ತಾನ್ ನಡುವೆ ಕ್ರಿಕೆಟ್ ಪಂದ್ಯ ನಡೆಸಬೇಕೆಂಬ ಸಲಹೆಯನ್ನು ಅವರು ತಿರಸ್ಕರಿಸುತ್ತಾರೆ. ಪಂದ್ಯ ನಡೆಯಲಿ ಎಂದು ನಾವು ಭಾವನಾತ್ಮಕವಾಗಿ ಸ್ಪಂದಿಸಬಹುದು. ಆದರೆ, ಈಗಿನ ತುರ್ತು ಅದಲ್ಲ. ನಿಮಗೆ ಹಣ ಬೇಕೆಂದರೆ ಗಡಿಯಲ್ಲಿನ ಚಟುವಟಿಕೆಗಳನ್ನು ನಿಲ್ಲಿಸಿ. ಅಲ್ಲಿ ವೆಚ್ಚ ಮಾಡುವ ಹಣದಿಂದ ಆಸ್ಪತ್ರೆ, ಶಾಲೆಗಳನ್ನು ನಿರ್ಮಿಸಿ. ಇನ್ನೂ ಹಣ ಬೇಕೆಂದಾದರೆ, ಧಾರ್ಮಿಕ ಸಂಸ್ಥೆಗಳಿಂದ ಪಡೆಯಲಿ. ಧಾರ್ಮಿಕ ಸಂಸ್ಥೆಗಳಿಗೂ ಹೊಣೆಗಾರಿಕೆ ಇದೆ. ಭಕ್ತರು ನೀಡಿದ ಹಣವನ್ನು ಸಮಾಜದ ಉದ್ಧಾರಕ್ಕಾಗಿ ನೀಡಲಿ. ಸರ್ಕಾರಕ್ಕೆ ನೆರವಾಗಲಿ ಎಂಬುದು ಅವರ ಸಲಹೆ.