ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಹಾಗೂ ಅದರ ರೂವಾರಿಗಳೆನ್ನಲಾದ ಇಬ್ಬರು ಪತ್ರಕರ್ತರನ್ನು ಪತ್ತೆ ಮಾಡಲು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಪೊಲೀಸರು ಕಾಯುತ್ತಿರುವಂತೆಯೇ ಆ ಯುವತಿ 3ನೇ ಬಾರಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತಮ್ಮ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುವುದಾಗಿ ಅವರು ಇವತ್ತು ರಿಲೀಸ್ ಆದ ವಿಡಿಯೋದಲ್ಲಿ ತಿಳಿಸಿದ್ದಾರೆ. ಒಂದು ವೇಳೆ ದೂರು ದಾಖಲಾದರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬಂಧನದ ಭೀತಿ ಎದುರಾಗಬಹುದು.
ಕಳೆದ 24 ದಿನಗಳಿಂದ ತಾನು ಕ್ಷಣಕ್ಷಣವೂ ಜೀವಭಯದಲ್ಲಿ ಒದ್ದಾಡುತ್ತಿದ್ದೇನೆ. ಈಗ ಹಲವು ಸಂಘಟನೆಗಳವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನನಗೀಗ ಧೈರ್ಯ ಬಂದಿದೆ. ನಮ್ಮ ಲಾಯರ್ ಜಗದೀಶ್ ಅವರ ಮುಖಾಂತರ ನಾನು ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ಈ ಯುವತಿ ಇವತ್ತಿನ ತಮ್ಮ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಂದು ವೇಳೆ, ರಮೇಶ್ ಜಾರಕಿಹೊಳಿ ಅವರಿಂದ ತನ್ನ ಮೇಲೆ ಅತ್ಯಾಚಾರ ಅಥವಾ ಅತ್ಯಾಚಾರಯತ್ನ ಆರೋಪಗಳನ್ನ ಮಾಡಿದರೆ ಮಾಜಿ ಸಚಿವರನ್ನ ಬಂಧಿಸುವ ಸಾಧ್ಯತೆ ಇಲ್ಲದಿಲ್ಲ.