ನವದೆಹಲಿ: ಸುಪ್ರೀಂಕೋರ್ಟ್ನಲ್ಲಿಂದು ವಲಸಿಗರ ಪರ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಯಲಿದೆ. ಲಾಕ್ಡೌನ್ ವೇಳೆ ಬೇರೆ ಬೇರೆ ಕಡೆಗಳಲ್ಲಿ ಸಿಲುಕಿಕೊಂಡಿರುವ ವಲಸಿಗರ ಕೊರೊನಾ ಪರೀಕ್ಷೆ ನೆಗೆಟಿವ್ ಬಂದಲ್ಲಿ, ಅವರನ್ನು ವಾಪಸ್ ತಮ್ಮ ತವರಿಗೆ ಕಳುಹಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಅಂತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದ್ದವು.ಕಳೆದ ತಿಂಗಳು ಕೇಂದ್ರ ಸರ್ಕಾರ, ದೇಶಾದ್ಯಂತ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದಾಗಿನಿಂದ, ಲಕ್ಷಾಂತರ ವಲಸಿಗರು ತಮ್ಮ ಊರಿಗೆ ವಾಪಸ್ ಹೋಗಲಾಗದೆ, ದುಡಿಯಲು ಕೆಲಸವಿಲ್ಲದೇ, ದುಡ್ಡು ಹಾಗೂ ಆಹಾರವಿಲ್ಲದೆ ದೇಶದ ನಾನಾ ಭಾಗದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಅವರ ರಕ್ಷಣೆ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.ಇನ್ನು, ವಲಸಿಗರ ರಕ್ಷಣೆ ವಿಚಾರವಾಗಿ ಮೃದು ಧೋರಣೆಯಿಂದ ಸಮರ್ಪಕವಾದ ನಿರ್ಧಾರಕ್ಕೆ ಬರುವಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್, ವಲಸಿಗರಿಗಾಗಿ ಕೇಂದ್ರ ಸರ್ಕಾರ ವಿಶೇಷ ರೈಲಿನ ವ್ಯವಸ್ಥೆ ಮಾಡಿ ಅವರಿಗೆ ಊರಿಗೆ ಹೋಗುಲು ವ್ಯವಸ್ಥೆ ಮಾಡಬೇಕು ಅಂತ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಕೂಡ ಇದೇ ರೀತಿಯ ವಿನಂತಿಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಒಂದು ವೇಳೆ ವಲಸಿಗರಿಗೆ ಅವರ ಊರಿಗೆ ಹೋಗಲು ಅನುವು ಮಾಡಿಕೊಟ್ಟಲ್ಲಿ, ಕೇವಲ ಅವರಷ್ಟೇ ಹೋಗುವುದಿಲ್ಲ, ತಮ್ಮ ಜೊತೆ ಕೊರೊನಾವನ್ನು ಕರೆದುಕೊಂಡು ಹೋಗುತ್ತಾರೆ ಅಂತ ಹೇಳಿದ್ದಾರೆ. ಇದೇ ವಿಚಾರವಾಗಿ ಈ ಹಿಂದೆ ಸುಪ್ರೀಂಕೋರ್ಟ್ನಲ್ಲಿ ನಡೆದಿದ್ದ ವಿಚಾರಣೆಯಲ್ಲೂ ಸಾಲಿಸಿಟರ್ ಜನರಲ್ ಅಶೋಕ್ ಮೆಹ್ತಾ ಕೂಡ ಗಡ್ಕರಿ ಮಾತನ್ನೇ ಉಲ್ಲೇಖಿಸಿದ್ದರು. ಅಲ್ಲದೇ ವಲಸಿಗರಿಗೆ ಅವರು ಉಳಿದ ಸ್ಥಳದಲ್ಲಿಯೇ ಊಟ, ವಸತಿಯ ವ್ಯವಸ್ಥೆ ಮಾಡುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ ಅಂತ ವಾದ ಮಂಡಿಸಿದ್ದರು.ಇಂದು ಕೂಡ ವಲಸಿಗರಿಗೆ ಸಂಬಂಧಿಸಿದ ಎರಡನೇ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ವಲಸಿಗರಿಗೆ ಲಾಕ್ಡೌನ್ ವೇಳೆ ಒದಗಿಸಬೇಕಾದ ಆಹಾರ ಧಾನ್ಯಗಳ ಕುರಿತಾಗಿ ಸರ್ವೋಚ್ಛ ನ್ಯಾಯಾಲಯ ತನ್ನ ಸೂಚನೆ ನೀಡಲಿದೆ.