ಚಿಕ್ಕಬಳ್ಳಾಪುರ: ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿ. ಪ್ಯಾನ್ಗಳನ್ನು ಅಳವಡಿಸಿ. ರೋಗಿಗಳಿಗೆ ಅನುಕೂಲ ಆಗುವಂತೆ ಕುರ್ಚಿಗಳನ್ನು ಹಾಕಿ. ಶೌಚಾಲಯದ ಸ್ವಚ್ಛತೆ ಕಾಪಾಡಿ. ಶೌಚಾಲಯವನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ ಗುತ್ತಿಗೆದಾರರನ್ನು ಬದಲಿಸಿ…ಹೀಗೆ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದರು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಸೂಚಿಸಿದರು.
ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಅವರು, ಪ್ರತಿ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳಿಂದ ಮಾಹಿತಿ ಪಡೆದರು.
ಏನಾಗಿದೆ ನಿನಗೆ. ಯಾವ ಊರು. ಕನ್ನಡವೊ ತೆಲುಗೊ. ಏನೂ ಆಗುವುದಿಲ್ಲ, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಆರೋಗ್ಯವಾಗುವೆ…ಹೀಗೆ ರೋಗಿಗಳ ಜತೆ ನ್ಯಾಯಮೂರ್ತಿಗಳು ಮಾತುಕತೆ ನಡೆಸಿದರು.
ಈ ವೇಳೆ ಆಸ್ಪತ್ರೆಯ ಕೆಲವು ವಾರ್ಡ್ಗಳಲ್ಲಿ ಪ್ಯಾನ್ ಇರಲಿಲ್ಲ. ಶೌಚಾಲಯಗಳು ಸ್ವಚ್ಛವಾಗಿರಲಿಲ್ಲ. ಇದನ್ನು ಕಂಡು ಇಲ್ಲಿ ಪ್ಯಾನ್ ಅಳವಡಿಸಬೇಕು. ಶೌಚಾಲಯಗಳ ಸ್ವಚ್ಛತೆ ಕಾಪಾಡಬೇಕು ಎಂದರು.
ನಂತರ ಆಸ್ಪತ್ರೆಯ ಕಾರಿಡಾರ್ ಗಮನಿಸಿ, ‘ನಾನು ಚಿಂತಾಮಣಿ, ಶಿಡ್ಲಘಟ್ಟ ಆಸ್ಪತ್ರೆಗೆ ಇಂದು ಭೇಟಿ ನೀಡಿದ್ದೇನೆ. ಅಲ್ಲಿನ ವ್ಯವಸ್ಥೆಗೆ ಹೋಲಿಸಿದರೆ ಇಲ್ಲಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ. ಸ್ವಚ್ಛತೆ ಕಾಪಾಡಬೇಕು. ಕಾರಿಡಾರ್ನಲ್ಲಿ ಕುರ್ಚಿಗಳನ್ನು ಹಾಕಿ’ ಎಂದು ಸೂಚಿಸಿದರು.
ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಬರುತ್ತಿದೆ. ಖುದ್ದಾಗಿ ನಾವೇ ಆಸ್ಪತ್ರೆಗಳಿಗೆ ಭೇಟಿ ನೀಡಿ ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ’ ಎಂದರು.
ಜನರಿಗೆ ಹೆಚ್ಚು ಚಿಕಿತ್ಸೆಯ ಸೌಲಭ್ಯಗಳು ಇಲ್ಲಿ ದೊರೆಯಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಯು ಬೆಡ್ಗಳು ಕಡಿಮೆ ಇವೆ ಎಂದು ಮಾಧ್ಯಮ ಪ್ರತಿನಿಧಿಗಳು ಗಮನಕ್ಕೆ ತಂದಾಗ, ‘ಸರ್ಕಾರದ ಗಮನಕ್ಕೆ ಈ ವಿಚಾರವನ್ನು ತಂದಿದ್ದೇವೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ. ನಾವೂ ಈ ಬಗ್ಗೆ ಗಮನ ಸೆಳೆಯುತ್ತೇವೆ’ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಲಕ್ಷ್ಮಿಕಾಂತ್ ಜಾನಕಿರಾಮ್ ಮಿಸ್ಕಿನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರುದ್ರಮೂರ್ತಿ ಹಾಗೂ ವೈದ್ಯರು, ಸಿಬ್ಬಂದಿ ಇದ್ದರು.
***
ನೆಲಮಹಡಿಗೆ ನೀರು; ಸರಿಪಡಿಸಿ
ಮಳೆಗಾಲದಲ್ಲಿ ಆಸ್ಪತ್ರೆಯ ನೆಲಮಹಡಿಯಲ್ಲಿ ನೀರು ತುಂಬಿಕೊಳ್ಳುವ ವಿಚಾರವನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದಾಗ, ‘ಮೊದಲು ಈ ಅವ್ಯವಸ್ಥೆ ಸರಿಪಡಿಸಿ. ಸಮಸ್ಯೆ ಆಗಬಾರದು. ಕಾಡು, ಕೆರೆಗಳನ್ನು ನಾವು ಧ್ವಂಸ ಮಾಡಿದ್ದೇವೆ. ಆ ಪರಿಣಾಮ ಎದುರಿಸುತ್ತಿದ್ದೇವೆ’ ಎಂದರು. ಆಗ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರುದ್ರಮೂರ್ತಿ, ‘ಈಗಾಗಲೇ ಎಂಜಿನಿಯರ್ಗಳು ಈ ಬಗ್ಗೆ ಪರಿಶೀಲಿಸಿದ್ದಾರೆ. ಸರಿಪಡಿಸಲಾಗುವುದು’ ಎಂದರು.
***
ಹೆರಿಗೆಗೆ ಹಣ ಪಡೆಯುವಂತಿಲ್ಲ
ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಸಿಜೇರಿಯನ್ ಮಾಡಿಸಲು ಹಣ ಪಡೆಯುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ ಎನ್ನುವ ವಿಚಾರವನ್ನು ಮಾಧ್ಯಮದವರು ವೀರಪ್ಪ ಅವರ ಗಮನಕ್ಕೆ ತಂದರು.
ಆಗ ವೀರಪ್ಪ ಅವರು, ‘ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಪಡೆಯುವಂತಿಲ್ಲ. ಈ ಬಗ್ಗೆ ನಾನೂ ವೈದ್ಯರನ್ನು ಕೇಳಿದೆ. ಅವರು ಈ ರೀತಿಯಲ್ಲಿ ಇಲ್ಲ ಎಂದರು. ಒಂದು ವೇಳೆ ಹಣ ಪಡೆದಿದ್ದು ಗಮನಕ್ಕೆ ಬಂದರೆ ಮಾಧ್ಯಮದವರು ಹೈಲೆಟ್ ಮಾಡಿ. ಸಾರ್ವಜನಿಕರು, ನಾವು, ನೀವು ಎಲ್ಲ ಸೇರಿ ಕೇಳೋಣ’ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada