ಡಾ. ರಾಜಕುಮಾರ್ ಅವರ ಚಿತ್ರಜೀವನದಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳಲ್ಲಿ ಒಂದು ಎಂದರೆ ಅದು ‘ಬಬ್ರುವಾಹನ’. 1977ರ ಫೆಬ್ರವರಿ 16ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಈಗ 45 ವರ್ಷಗಳು. ಮಹಾಭಾರತದ ಕಥೆಯನ್ನು ಆಧರಿಸಿ, ಹುಣಸೂರು ಕೃಷ್ಣಮೂರ್ತಿ ಚಿತ್ರಕಥೆ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ರಾಜಕುಮಾರ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಅರ್ಜುನ ಮತ್ತು ಅವನ ಮಗ ಬಬ್ರುವಾಹನನ ಪಾತ್ರಗಳಲ್ಲಿ ಮಿಂಚಿದ್ದರು. ಕೆ.ಸಿ.ಎನ್. ಗೌಡ ನಿರ್ವಣದ ಈ ಚಿತ್ರದಲ್ಲಿ ಬಿ. ಸರೋಜಾದೇವಿ, ಕಾಂಚನಾ, ರಾಮಕೃಷ್ಣ ಮುಂತಾದವರು ನಟಿಸಿದ್ದರು.
ಶ್ರೀಕೃಷ್ಣನ ಪಾತ್ರ ಮಾಡುವುದಕ್ಕೆ ಜನಪ್ರಿಯರಾಗಿದ್ದ ತೆಲುಗು ನಟ ಎನ್ಟಿಆರ್ ಅವರನ್ನು ಕರೆಸಬೇಕು ಎಂದು ಮೊದಲು ಚರ್ಚೆ ನಡೆದಿದ್ದರೂ, ಆ ನಂತರ ಈ ಪಾತ್ರಕ್ಕೆ ರಾಮಕೃಷ್ಣ ಅಂತಿಮವಾಗಿ ಆಯ್ಕೆಯಾದರು ಎಂದು ಹೇಳಲಾಗುತ್ತದೆ. ಈ ಚಿತ್ರವು ನಿರೂಪಣೆ ಮತ್ತು ಅಭಿನಯಕ್ಕಷ್ಟೇ ಅಲ್ಲ, ಹಾಡುಗಳಿಗೆ ಸಹ ಇಂದಿಗೂ ಜನಪ್ರಿಯ. ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ’, ‘ನಿನ್ನ ಕಣ್ಣ ನೋಟದಲ್ಲಿ’, ‘ಈ ಸಮಯ ಆನಂದಮಯ’, ‘ಆರಾಧಿಸುವೆ ಮದನಾರಿ’ ಮುಂತಾದ ಹಾಡುಗಳು ಈಗಲೂ ಜನಪ್ರಿಯ.
ಈ ಚಿತ್ರವು ಕನ್ನಡದಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದಷ್ಟೇ ಅಲ್ಲ, ತೆಲುಗಿಗೆ ‘ಅರ್ಜುನ ಗರ್ವಭಂಗಂ’ ಮತ್ತು ಹಿಂದಿಗೆ ‘ವೀರ್ ಅರ್ಜುನ್’ ಎಂಬ ಹೆಸರಿನಲ್ಲಿ ಡಬ್ ಆಗಿದ್ದು ವಿಶೇಷ. ಕೆಲವು ವರ್ಷಗಳ ಹಿಂದೆ, ‘ಬಬ್ರುವಾಹನ’ ಹೊಸ ತಂತ್ರಜ್ಞಾನದಲ್ಲಿ ಬಿಡುಗಡೆಯಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: