ಬರೋಬ್ಬರಿ ಇಪ್ಪತ್ತೆರಡು ತಿಂಗಳುಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲು ಸಜ್ಜಾಗಿದ್ದು, ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಗಣರಾಜ್ಯೋತ್ಸವದ ದಿನದಂದು ಕ್ರಾಂತಿ ಬಿಡುಗಡೆಯಾಗಲಿದ್ದು, ದರ್ಶನ್ ಅಭಿಮಾನಿಗಳು ಬಹಳ ದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆ ಮೇಲೆ ನೋಡಲು ಕಾತರರಾಗಿದ್ದಾರೆ.
ಇದೇ ರೀತಿ ಕ್ರಾಂತಿ ಚಿತ್ರ ನೋಡಬೇಕು, ಕ್ರಾಂತಿ ಚಿತ್ರ ದಾಖಲೆಯನ್ನು ಮಾಡಬೇಕು ಎಂದು ಆಸೆಯನ್ನು ಇಟ್ಟುಕೊಂಡು ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಯೋರ್ವ ಮೃತಪಟ್ಟಿದ್ದು, ದರ್ಶನ್ ಅಭಿಮಾನಿಗಳು ಆತನಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹೌದು, ಅಭಿ ಎಂಬ ಅಪ್ಪಟ ದರ್ಶನ್ ಅಭಿಮಾನಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಅಪಾರವಾದ ದರ್ಶನ್ ಅಭಿಮಾನಿಗಳು ಪೋಸ್ಟ್ ಹಂಚಿಕೊಂಡಿದ್ದು, ನಟ ದರ್ಶನ್ ಕೂಡ ಅಭಿ ಮರಣದ ಕುರಿತು ಟ್ವೀಟ್ ಮಾಡಿ ಸಂತಾಪ ಸೂಚಿಸುವುದರ ಜತೆಗೆ ಸಂದೇಶವೊಂದನ್ನು ಸಹ ರವಾನಿಸಿದ್ದಾರೆ. ಹೌದು, ಅಭಿಮಾನಿಯಾದ ಅಭಿ ಬಗ್ಗೆ ದರ್ಶನ್ ಮಾಡಿರುವ ಟ್ವೀಟ್ ಹೀಗಿದೆ: “ಎಲ್ಲರಿಗೂ ಕಳಕಳಿಯ ಮನವಿ. ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗೃಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ.ಅಭಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.”
ಹೀಗೆ ಬೈಕ್ ಓಡಿಸುವಾಗ ಜಾಗರೂಕರಾಗಿರಿ ಎಂದು ದರ್ಶನ್ ಸಂದೇಶ ರವಾನಿಸಿದ್ದು, ಅವರ ಅಭಿಮಾನಿಗಳೂ ಸಹ ಇದಕ್ಕೆ ಸ್ಪಂದಿಸಿದ್ದು, ನೀವು ಹೇಳಿದ ಹಾಗೆ ನಿಧಾನವಾಗಿ ಗಾಡಿ ಓಡಿಸ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಇದೇ ಅಭಿ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಟ್ರೈಲರ್ ವೀಕ್ಷಿಸಿ ಟ್ರೈಲರ್ ತುಂಬಾ ಚೆನ್ನಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದ, ದರ್ಶನ್ ಅವರ ದೇವಸ್ಥಾನವನ್ನೂ ಸಹ ಕಟ್ಟಿಸುತ್ತೇವೆ ಎಂದಿದ್ದ, ಕ್ರಾಂತಿ ಬಿಡುಗಡೆ ದಿನ ಗಣರಾಜ್ಯೋತ್ಸವದ ಜತೆಗೆ ಕನ್ನಡ ರಾಜ್ಯೋತ್ಸವವನ್ನೂ ಸಹ ಮಾಡಲಿದ್ದೇವೆ ಎಂದು ಚಿತ್ರ ನೋಡುವುದಕ್ಕಾಗಿ ಕಾತರನಾಗಿರುವುದಾಗಿ ಹೇಳಿಕೊಂಡಿದ್ದ. ಅಂದು ನೆಚ್ಚಿನ ನಟನ ಚಿತ್ರದ ಬಗ್ಗೆ ಇಷ್ಟೆಲ್ಲಾ ಆಸೆಯಿಂದ ಹೇಳಿಕೊಂಡಿದ್ದ ಅಭಿ ಈಗ ಇಹಲೋಕ ತ್ಯಜಿಸಿರುವುದು ಬೇರಸದ ಸಂಗತಿ.
ಇನ್ನು ಅಭಿ ಸಾವಿನ ಬಳಿಕ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಆತ ಪುನೀತ್ ರಾಜ್ಕುಮಾರ್ ಬ್ಯಾನರ್ ಒಂದಕ್ಕೆ ಪೂಜೆ ಮಾಡುತ್ತಿರುವ ವಿಡಿಯೊ ಸಹ ಸೇರಿದೆ. ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ಇಲ್ಲಾ ನಟರನ್ನೂ ಗೌರವಿಸುತ್ತಿದ್ದ ಒಂದೊಳ್ಳೆ ಜೀವ ಹೋಯಿತ್ತಲ್ಲ ಎಂದು ಮರುಗಿದ್ದಾರೆ.
ಇನ್ನು ಅಭಿ ಎಂಬ ದರ್ಶನ್ ಅಭಿಮಾನಿ ಈಗ ಇಹಲೋಕ ತ್ಯಜಿಸಿದ್ದು, ಆತನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಶಬರಿಮಲೆ, ಧರ್ಮ ಸ್ಥಳ ರೀತಿಯ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ್ದ ಅಭಿ ಅಷ್ಟು ದೂರದವರೆಗೂ ಕ್ರಾಂತಿ ಚಿತ್ರದ ಬ್ಯಾನರ್ ಕೊಂಡೊಯ್ದು ದೇವಸ್ಥಾನಗಳ ಮುಂದೆ ಬ್ಯಾನರ್ ಹಿಡಿದು ಪ್ರಾರ್ಥಿಸಿ, ಕ್ರಾಂತಿ ಯಶಸ್ಸು ಸಾಧಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಬಂದಿದ್ದ. ಆದರೆ ಚಿತ್ರ ಬಿಡುಗಡೆಯಾಗುವ ಮುನ್ನವೇ ಆತ ಎಲ್ಲರನ್ನೂ ಅಗಲಿ ಬಾರದ ಊರಿಗೆ ಪಯಣ ಬೆಳೆಸಿದ್ದಾನೆ. ಇನ್ನು ಕೆಲ ದರ್ಶನ್ ಅಭಿಮಾನಿಗಳು ದರ್ಶನ್ ಮಾಡಿರುವ ಈ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ್ದು, ದಯವಿಟ್ಟು ಆತನ ಮನೆಗೆ ಭೇಟಿ ನೀಡಿ ಆತನ ಪೋಷಕರಿಗೆ ಸಾಂತ್ವನ ಹೇಳಿ ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಆತನ ಅಂತಿಮ ದರ್ಶನ ಮಾಡಿ ಎಂದೂ ಸಹ ರಿಪ್ಲೈ ಮಾಡಿದ್ದಾರೆ.
https://play.google.com/store/apps/details?id=com.speed.newskannada