ರಮೇಶಚಂದ್ರ ಮಜುಮ್ದಾರ್ 1888ನೇ ವರ್ಷದ ಡಿಸೆಂಬರ್ 4ರಂದು ಫರೀದ್ಪುರ ಜಿಲ್ಲೆಯ ಕಾಂದಾರಪಾಡದಲ್ಲಿ (ಈಗ ಬಾಂಗ್ಲಾದೇಶದಲ್ಲಿದೆ) ಹುಟ್ಟಿದರು. ತಂದೆ ಹಲಧರ ಮಜುಮ್ದಾರ್ ಅವರು ಮತ್ತು ತಾಯಿ ವಿದುಮುಖಿದೇವಿ ಅವರು.
ಕಾಂದಾರ್ಪಾಡದಲ್ಲಿಯ ಶಾಲೆಯಲ್ಲಿ ಏಳು ವರ್ಷಗಳ ಕಾಲ ಶಿಕ್ಷಣ ಪಡೆದ ಮಜುಮ್ದಾರ್ ಅವರು ತಮ್ಮ ಅಣ್ಣನ ಕೆಲಸ ಸ್ಥಳ ವರ್ಗಾವಣೆಯಿಂದಾಗಿ ವಿದ್ಯಾಭ್ಯಾಸಕ್ಕಾಗಿ ಊರಿಂದೂರಿಗೆ ಅಲೆದಾಟ ಮಾಡಬೇಕಾಯಿತು. 1900ರಲ್ಲಿ ಕಲ್ಕತ್ತೆಗೆ ಬಂದು ಸೌತ್ ಸಬರ್ಬನ್ ಶಾಲೆ ಸೇರಿದರು. ಅನಂತರ ಡಾಕ್ಕಾ, ಹೂಗ್ಲಿ, ಕಲ್ಕತ್ತ ಮತ್ತು ಕಟಕ್ ನಗರಗಳಲ್ಲಿದ್ದರು. 1905ರಲ್ಲಿ ರ್ಯಾವೆನ್ಷಾ ಕೊಲೇಜಿಯೇಟ್ ಶಾಲೆಯಿಂದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವಿದ್ಯಾರ್ಥಿವೇತನ ಪಡೆದರು. ಮುಂದೆ ಕಲ್ಕತ್ತೆಗೆ ಬಂದು ರಿಪನ್ (ಆಗಿನ ಸುರೇಂದ್ರನಾಥ್) ಕಾಲೇಜಿಗೆ ಸೇರಿ ಫಸ್ಟ್ ಆಟ್ರ್ಸ್ ಪರೀಕ್ಷೆಯಲ್ಲಿ ಪ್ರಥಮವರ್ಗದಲ್ಲಿ ಉತ್ತೀರ್ಣರಾದರು. ಇತಿಹಾಸದಲ್ಲಿ ಬಿ.ಎ. (ಆನರ್ಸ್) ಗಾಗಿ ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜ್ ಸೇರಿ ದ್ವಿತೀಯ ವರ್ಗದಲ್ಲಿಯೂ ಮುಂದೆ ಅದೇ ಕಾಲೇಜಿನಿಂದ ಎಂ.ಎ (ಇತಿಹಾಸ) ಪ್ರಥಮ ದರ್ಜೆಯಲ್ಲಿಯೂ (1911) ಉತ್ತೀರ್ಣರಾದರು. ಬಳಿಕ ಕಾನೂನು ಪರೀಕ್ಷೆಯ ಪ್ರಥಮ ಭಾಗದಲ್ಲಿ ತೇರ್ಗಡೆಯಾಗಿ ಸ್ವಲ್ಪ ಸಮಯ ಕಲ್ಕತ್ತ ಹೈಕೋರ್ಟಿನಲ್ಲಿ ಗುಮಾಸ್ತರಾಗಿದ್ದರು. ಈ ವೃತ್ತಿ ಅವರಿಗೆ ಒಗ್ಗಲಿಲ್ಲ. ಹರಪ್ರಸಾದ ಶಾಸ್ತ್ರೀಯವರ ಸಂಪರ್ಕದಿಂದಾಗಿ ಇತಿಹಾಸ ಸಂಶೋಧನೆಯತ್ತ ಗಮನ ಹರಿಸಿದರು. ಪ್ರೇಮಚಂದ್ ರಾಯ್ಚಂದ್ ವಿದ್ಯಾರ್ಥಿವೇತನಕ್ಕೆ ಆಂಧ್ರ-ಕುಶಾನಯುಗದ (ಕ್ರಿ.ಪೂ.2ನೆಯ ಶತಮಾನದಿಂದ ಕ್ರಿ.ಶ. 2ನೆಯ ಶತಮಾನ) ಬಗ್ಗೆ ಪ್ರೌಢ ಪ್ರಬಂಧ ಸಲ್ಲಿಸುವ ಅರ್ಹತೆ ಪಡೆದರು. ಕುಶಾನಶಕೆಗೆ ಸಂಬಂಧಿಸಿದಂತೆ ಇವರು ಹೊಸ ಸಿದ್ಧಾಂತವನ್ನೇ ಮಂಡಿಸಿದರು.
ಮುಂದೆ ಮಜುಮ್ದಾರ್ ಅವರು 1913 ವರ್ಷದಲ್ಲಿ ಢಾಕ್ಕಾದ ಟೀಚರ್ಸ್ ಟ್ರೈನಿಂಗ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಬೋಧನ ವೃತ್ತಿ ಆರಂಭಿಸಿದರು. 1921 ಜುಲೈನಿಂದ 1936 ಮಾರ್ಚ್ ತನಕ ಢಾಕ್ಕಾ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಇತಿಹಾಸ ಪ್ರಾಧ್ಯಾಪಕರಾಗಿದ್ದರು. 1937ರಲ್ಲಿ ಆ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಇತಿಹಾಸ ಪ್ರಾಧ್ಯಾಪಕರಾಗಿದ್ದರು. 1937ರಲ್ಲಿ ಆ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಂಡು ನಿವೃತ್ತರಾಗುವತನಕ (1942 ಜೂನ್ 30) ಆ ಹುದ್ದೆಯಲ್ಲಿಯೇ ಮುಂದುವರಿದರು. ಇವರು ಕೆಲಕಾಲ ಕಲ್ಕತ್ತೆಯ ಹತ್ತಿ ಗಿರಣಿಯೊಂದರ ನಿರ್ದೇಶಕರೂ ಆಗಿದ್ದರು. ಅಲ್ಲಿಯ ವ್ಯವಹಾರಗಳು ಸರಿಬೀಳದೆ ಅದಕ್ಕೆ ರಾಜೀನಾಮೆ ನೀಡಿದರು. ಅನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಚ್ಯಶಾಸ್ತ್ರ ಕಾಲೇಜಿನ ಪ್ರಿನ್ಸಿಪಾಲರಾಗಿಯೂ ನಾಗಪುರ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಹೀಗೆ ಮಜುಮ್ದಾರ್ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು.
Please follow and like us: