ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 9 ದಿನದಿಂದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇನ್ನೂ ನಿಂತಿಲ್ಲ. ನಿನ್ನೆ ಚಿತ್ರನಟ ಯಶ್ಗೆ ಪತ್ರ ಬರೆದಿದ್ದ ಸಾರಿಗೆ ನೌಕರರು, ನಿಮ್ಮ ತಂದೆ ಬಿಎಂಟಿಸಿ ನಿವೃತ್ತ ಚಾಲಕರು. ಸಾರಿಗೆ ನೌಕರರ ಕುಟುಂಬದ ಹಿನ್ನೆಲೆಯುಳ್ಳ ನೀವು ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದರು.
ಇಂದು ಟ್ವೀಟ್ ಮೂಲಕ ಇದಕ್ಕೆ ಪ್ರತಿಕ್ರಿಯಿಸಿರುವ ಯಶ್, ಇಂದು ನಿಮ್ಮ ಯಶ್ ಏನೇ ಆಗಿರಬಹುದು. ಆದರೆ ಅದಕ್ಕೂ ಮೊದಲು ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ. ನಮ್ಮ ತಂದೆಯಿಂದ ನಿಮ್ಮ ಕಷ್ಟ ಏನೆಂದು ಅರಿತಿದ್ದೇನೆ ಎಂದು ವಿವರಿಸಿದ್ದಾರೆ.
ಮನೆಯಲ್ಲಿ ನಾನು ತಡ ಮಾಡಿದ್ರೆ ದಿನಾಲೂ ನನ್ನ ಬಸ್ಸಿನಲ್ಲಿಯೇ ಬರೋ ಪ್ರಯಾಣಿಕರಿಗೆ ಟ್ರೈನ್ ಮಿಸ್ ಆಗುತ್ತೇನೋ… ಆಫೀಸ್ಗೆ ಲೇಟ್ ಆಗುತ್ತೇನೋ.. ಅಂತ ನಮ್ಮಪ್ಪ ಎಷ್ಟೋ ದಿನ ಬೆಳಗ್ಗೆ ಮನೆಯಲ್ಲಿ ತಿಂಡಿ ಕೂಡ ತಿನ್ನದೇ ಗಡಿಬಿಡಿಯಲ್ಲಿ ನಡೆಯುತ್ತಿದ್ದ ಆ ದಿನಗಳು ಈಗಲೂ ನೆನಪಾಗುತ್ತೆ. ಬಹುಶಃ ಇದು ನನ್ನ ಅಪ್ಪನ ಕತೆ ಮಾತ್ರವಲ್ಲ, ಕರ್ತವ್ಯ ನಿಷ್ಟೆ ಮೆರೆವ ಸಾವಿರಾರು ಸಾರಿಗೆ ನೌಕರರುಗಳ ದಿನಚರಿ ಹೀಗೆ ಇರುತ್ತೆ ಎಂದು ಯಶ್ ಪತ್ರದಲ್ಲಿ ವಿವರಿಸಿದ್ದಾರೆ.
ಸಾರಿಗೆ ನೌಕರರ ಕೂಗು ಮತ್ತು ಪ್ರಯಾಣಿಕರ ಅಳಲು ಈ ಎರಡೂ ನನ್ನನ್ನ ಬಹುವಾಗಿ ಕಾಡುತ್ತಿದೆ. ಈ ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನವೆಂಬಂತೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿ ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಸಚಿವರು ಸಾರಿಗೆ ನೌಕರರ ವೇತನ ತಾರತಮ್ಯ ಸರಿಪಡಿಸುವುದಾಗಿ ಹೇಳಿದ್ದು ನನಗೆ ಖುಷಿ ಕೊಟ್ಟಿತು ಎಂದು ಯಶ್ ತಿಳಿಸಿದ್ದಾರೆ.