ಬೆಂಗಳೂರು: ಜನತಾ ಜಲಧಾರೆ ಸಮಾವೇಶದ ಮೂಲಕ
ಅಶ್ವಮೇಧಯಾಗ ಶುರು ಮಾಡಿದ್ದೇವೆ. ಕುದುರೆ ಬಿಟ್ಟಿದ್ದೇವೆ. ಅರ್ಜುನನ ಹಾಗೆ ಕುಮಾರಸ್ವಾಮಿ, ಕೃಷ್ಣನಾಗೆ ದೇವೇಗೌಡರು ಇದ್ದಾರೆ. ರಥ ಓಡಿಸಲು ನಾನು ಇದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಮ್ಮದೇ ಮಾತಿನ ಶೈಲಿಯಲ್ಲಿ ಹೇಳಿದ್ದಾರೆ.
ನೆಲಮಂಗಲ ಸಮೀಪ ಇಂದು ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಮೇಕೆ ದಾಟಿಸೋದಿಲ್ಲ, ಸಿಂಹ ದಾಟಿಸುವವರು. ನಮ್ಮ ಹುಲಿ ಕುಮಾರಸ್ವಾಮಿ, ಹುಲಿಯನ್ನು ದಾಟಿಸುತ್ತೇವೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ದೇವೇಗೌಡರ ಮನೆಯಲ್ಲಿ ನಾನು ದೊಡ್ಡಮಗ. ಕುಟುಂಬ ರಾಜಕಾರಣ ಅಂತಾರೆ. ಪ್ರಜ್ವಲ್, ನಿಖಿಲ್, ಸೂರಜ್ ಮೂವರು ಇದ್ದಾರೆ. ದೇವೇಗೌಡರ ಕುಟುಂಬದ ಬಗ್ಗೆ ವಿರೋಧ ಮಾಡುತ್ತಾರೆ. ಇದು ಬಿತ್ತನೆ ಬೀಜ ಮಾರುವ ಬೀಜವಲ್ಲ.
ನಾವು ರೈತರ ಮಕ್ಕಳು, ನಮ್ಮ ಬಳಿ ದುಡ್ಡಿಲ್ಲ ಎಂದರು.
ಕೇಂದ್ರ ಸರ್ಕಾರ ಎಲ್ಐಸಿ ಎಲ್ಲವನ್ನೂ ಮಾರುತ್ತಿದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಏನೂ ಮಾರಲಿಲ್ಲ. ದೇವೇಗೌಡರು ಬಂದಾಗ ಮೋದಿ ಕೂಡ ಎದ್ದು ನಿಂತು ಗೌರವ ಕೊಡುತ್ತಾರೆ. ಇಡಿ, ಸಿಡಿ ಏನಾದರೂ ಆರೋಪ ಗೌಡರ ಮೇಲಿದೆಯಾ ? ದೇವೇಗೌಡರು ಶೂದ್ರ ಜಾತಿಯಲ್ಲಿ ಹುಟ್ಟದೇ ತಪ್ಪಾಯ್ತು. ರೈತರ ಮನೆತನದಲ್ಲಿ ಹುಟ್ಟಿದ್ದೆ ತಪ್ಪಾಗಿ ಹೋಯ್ತು.
ಪಂಜಾಬ್ ನಲ್ಲಿ ಭತ್ತದ ತಳಿಗೆ ದೇವೇಗೌಡರ ಹೆಸರು ಇಡಲಾಗಿದೆ ಎಂದು ಹೇಳಿದರು.
ದೇವೇಗೌಡರನ್ನು ಅಧಿಕಾರದಿಂದ ಇಳಿಸಿದ್ದೆ ಕಾಂಗ್ರೆಸ್ ಗೆ ದರಿದ್ರ ಬಂದಿದೆ. ಅಂದಿನಿಂದ ಇವತ್ತಿನವರೆಗೂ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಬರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಗುಜರಾತ್ ಮಾಡೆಲ್ ನಮಗೆ ಬೇಡ. ಗುಜರಾತ್ ನವರು ಪಾನಿಪೂರಿ ಮಾರುತ್ತಾರೆ. ಕನ್ನಡಿಗರ್ಯಾರು ಪಾನಿಪುರಿ ಮಾರುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದ ಬಸವನಬಾಗೇವಾಡಿ, ಬಸವನಕಲ್ಯಾಣ ಮತ್ತು ಕಲಬುರಗಿಯ ಬಂಡೇನವಾಜ್ ಸನ್ನಿಧಿಗೆ ಭೇಟಿ ನೀಡಿದ ಬಳಿಕ ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸಲು ಪ್ರವಾಸ ಕೈಗೊಳ್ಳುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಮತಗಟ್ಟೆ ಸಮಿತಿಗಳನ್ನು ರಚಿಸಬೇಕು. ಪಕ್ಷವನ್ನು ಸಧೃಢಗೊಳಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕು ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada