ದೀಸ್ಪುರ್: ಭಾರೀ ಪ್ರವಾಹದ ಹೊಡೆತಕ್ಕೆ ಅಸ್ಸಾಂ ರಾಜ್ಯ ತತ್ತರಿಸಿದೆ. ಜಮುನಮುಖ್ ಜಿಲ್ಲೆಯ ಎರಡು ಪ್ರವಾಹ ಪೀಡಿತ ಗ್ರಾಮದ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ನೆಲೆ ಕಳೆದುಕೊಂಡಿದ್ದು, ರೈಲ್ವೆ ಹಳಿಗಳ ಮೇಲೆ ತಾತ್ಕಾಲಿಕ ಬದುಕು ಸಾಗಿಸುವಂತಹ ಶೋಚನಿಯ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರವಾಹದ ನೀರಿಗೆ ಮುಳಗಡೆಯಾಗದಷ್ಟು ಎತ್ತರದಲ್ಲಿರುವ ಒಂದೇ ಒಂದು ಪ್ರದೇಶ ರೈಲ್ವೆ ಹಳಿಯಾಗಿರುವುದರಿಂದ ಎರಡು ಗ್ರಾಮದ ಕುಟುಂಗಳು ಹಳಿಗಳ ಮೇಲೆ ಬದುಕುವಂತಾಗಿದೆ. ಅಸ್ಸಾಂ ಪ್ರವಾಹದಲ್ಲಿ ಬಹುತೇಕ ಎಲ್ಲವನ್ನೂ ಕಳೆದುಕೊಂಡಿರುವ ಚಂಗ್ಜುರೈ ಮತ್ತು ಪಾಟಿಯಾ ಪಥರ್ ಗ್ರಾಮದ ನಿವಾಸಿಗಳು ತೀವ್ರ ಸಂಕಷ್ಟು ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸದ್ಯ ಟಾರ್ಪಾಲಿನ್ ಶೀಟ್ಗಳಿಂದ ನಿರ್ಮಿಸಲಾದ ತಾತ್ಕಾಲಿಕ ಶೆಡ್ಗಳ ಅಡಿಯಲ್ಲಿ ಆಶ್ರಯ ಪಡೆದಿದ್ದಾರೆ.
ಅಸ್ಸಾಂನಲ್ಲಿ ಈಗಲು ಪರಿಸ್ಥಿತಿ ಕಳವಳಕಾರಿಯಾಗಿದೆ. ರಾಜ್ಯದ 29 ಜಿಲ್ಲೆಗಳ 2,585 ಗ್ರಾಮಗಳ 8 ಲಕ್ಷಕ್ಕೂ ಹೆಚ್ಚು ಜನರು ಎಡಬಿಡದೆ ಸುರಿಯುತ್ತಿರುವ ಮಳೆಗೆ ಸಿಲುಕಿದ್ದಾರೆ. ಮಳೆಯ ಪ್ರಚೋದನೆಯಿಂದ ಉಂಟಾದ ಭೂಕುಸಿತಕ್ಕೆ ಸುಮಾರು 14 ಮಂದಿ ಈವರೆಗೆ ಮೃತಪಟ್ಟಿದ್ದಾರೆ.
ಪೈಠಾ ಪತ್ತಾರ್ ಗ್ರಾಮದ ಮೊನ್ವಾರಾ ಬೇಗಂ (43) ಸದ್ಯ ತಾತ್ಕಾಲಿಕ ಶೆಡ್ನಲ್ಲಿ ವಾಸಿಸುತ್ತಿದ್ದಾರೆ. ಪ್ರವಾಹದಿಂದ ಬದುಕುಳಿಯಲು ಇತರ ನಾಲ್ಕು ಕುಟುಂಬಗಳು ಅವಳೊಂದಿಗೆ ಸೇರಿಕೊಂಡಿವೆ ಮತ್ತು ಅವರೆಲ್ಲರೂ ಒಂದೇ ಸೂರಿನಡಿ ಬಹುತೇಕ ಆಹಾರವಿಲ್ಲದೆ ಅಮಾನವೀಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಾವು ಛಾವಣಿ ಇಲ್ಲದ ಮನೆಯಲ್ಲಿದ್ದೆವು. ನಂತರ ಸ್ವಲ್ಪ ಹಣವನ್ನು ಸಾಲವಾಗಿ ತೆಗೆದುಕೊಂಡು ಟಾರ್ಪಾಲಿನ್ ಖರೀದಿಸಿದ್ದೇವೆ. ಒಂದೇ ಟಾರ್ಪಾಲಿನ್ ಅಡಿಯಲ್ಲಿ ಐದು ಕುಟುಂಬಗಳು ವಾಸಿಸುತ್ತಿದ್ದೇವೆ. ನಮಗೆ ಯಾವುದೇ ಗೌಪ್ಯತೆ ಇಲ್ಲ ಎಂದು ಮೊನ್ವಾರಾ ಬೇಗಂ ನೋವಿನ ಮಾತುಗಳನ್ನಾಡಿದ್ದಾರೆ.
ಅಸ್ಸಾಂನಲ್ಲಿ ಸಾಕಷ್ಟು ಮಂದಿ ಪ್ರವಾಹ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಳೆ ಮತ್ತೆ ಮುಂದುವರಿದರೆ, ಪರಿಸ್ಥಿತಿ ಇನ್ನಷ್ಟು ಭೀಕರವಾಗಿರಲಿದೆ. ಸದ್ಯ ಅಸ್ಸಾಂನಲ್ಲಿ ಸೇನೆ, ಅರೆಸೇನಾ ಪಡೆಗಳು ಮತ್ತು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆಗಳು ದೋಣಿಗಳು ಮತ್ತು ಹೆಲಿಕಾಪ್ಟರ್ಗಳನ್ನು ಬಳಸಿಕೊಂಡು ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಂದ 21,884 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿವೆ ಎಂದು ವರದಿಯಾಗಿದೆ. 343 ಪರಿಹಾರ ಶಿಬಿರಗಳಲ್ಲಿ 86,772 ಜನರು ಆಶ್ರಯ ಪಡೆದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada