ಪ್ರೀತಿಸಿ ಮದುವೆಯಾಗಿದ್ದ ಯುವಕನ ಮೇಲೆ ಹೆಂಡತಿಯ ಅಪ್ಪ, ಅಮ್ಮ, ತಮ್ಮ, ಅಣ್ಣ, ದೊಡ್ಡಪ್ಪರಿಂದ ಹಲ್ಲೆ ನಡೆದ ಘಟನೆ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಡಿಎ ತಾಂಡಾದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕ ಸರ್ಜುನ್ ನಾಯ್ಕ್ ಎಂದು ತಿಳಿದು ಬಂದಿದೆ. ಕಳೆದ 8 ತಿಂಗಳ ಹಿಂದೆ ಇದೇ ತಾಂಡಾದ ಪವಿತ್ರ ಬಾಯಿ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದ ಸರ್ಜುನ್ ನಾಯ್ಕ್, ಇವರ ಪ್ರೀತಿಗೆ ಪವಿತ್ರಾ ಬಾಯಿ ಮನೆಯವರ ವಿರೋಧವಿದ್ದು, ವಿರೋಧದ ನಡುವೆಯೆ ಓಡಿಹೋಗಿ ಬೇರೆಡೆ ಇವರಿಬ್ಬರು ಮದುವೆಯಾಗಿದ್ದರು. ಈ ಕಾರಣಕ್ಕೆ ಕೋಪಗೊಂಡಿದ್ದ ಪವಿತ್ರಾ ಬಾಯಿಯ ಕುಟುಂಬಸ್ಥರು ಸರ್ಜುನ್ ನಾಯ್ಕ್ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪವಿತ್ರಾ ಬಾಯಿ ತಂದೆ ವೆಂಕಟೇಶ್ ನಾಯ್ಕ್, ದೊಡ್ಡಪ್ಪ ರಂಗನಾಯ್ಕ್, ಅಣ್ಣ ತಿಪ್ಪೇಶ್ ನಾಯ್ಕ್, ಅಕ್ಕ ಕಲಾವತಿ, ಅಣ್ಣ ರಾಮಾನಾಯ್ಕ್, ತಮ್ಮ ನವೀನ್ ನಾಯ್ಕ್ ಸೇರಿದಂತೆ 15 ಜನರು ಸೇರಿ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಸದ್ಯಕ್ಕೆ ಸರ್ಜುನ್ ನಾಯ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 8 ಜನರ ಮೇಲೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.