ಬೆಂಗಳೂರು, ಏಪ್ರಿಲ್ 21 : ಬೆಂಗಳೂರಿನಲ್ಲಿ ಇತ್ತೀಚಿಗೆ ಬಿಬಿಎಂಪಿ ಕಸದ ಲಾರಿಗಳು ಅಪಘಾತಕ್ಕೀಡಾಗುತ್ತಿರುವ ಹಿನ್ನಲೆ, ಬುಧವಾರ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ನಗರದಲ್ಲಿರುವ 652 ವಾಹನಗಳು ಹಾಗೂ ಚಾಲಕರನ್ನ ಪರಿಶೀಲನೆ ನಡೆಸಿದ್ದರು. ಈ ಕಾರ್ಯಾಚರಣೆ ವೇಳೆ ಓರ್ವ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ.
ಉಳಿದಂತೆ ವಿವಿಧ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದಕ್ಕಾಗಿ 307 ಮಂದಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಒಂದು ತಿಂಗಳೊಳಗೆ ಬಿಬಿಎಂಪಿ ಕಸದ ಲಾರಿಗಳು ನಗರದಲ್ಲಿ 11 ವರ್ಷದ ಬಾಲಕಿ ಸೇರಿದಂತೆ ಮೂವರನ್ನು ಬಲಿ ಪಡೆದುಕೊಂಡಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಿಂದಲೂ ಬಿಬಿಎಂಪಿ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಮಂಗಳವಾರ ವಾಹನಗಳ ಸುರಕ್ಷತಾ ಅಂಶಗಳ ಕುರಿತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಜಂಟಿ ಪೊಲೀಸ್ ಆಯುಕ್ತ ಬಿ.ಆರ್ ರವಿಕಾಂತೇಗೌಡ ಸಭೆ ನಡೆಸಿದ್ದರು. ಸಭೆಯಲ್ಲಿ ಪ್ರಮುಖವಾಗಿ ಕಸದ ಲಾರಿಗಳು ಸರಿಯಾಗಿರುವುದಕ್ಕೆ ಪ್ರಮಾಣಪತ್ರವನ್ನ ಕಡ್ಡಾಯಗೊಳಿಸಬೇಕು ಹಾಗೂ ಬಿಬಿಎಂಪಿಯು ಆಲ್ಕೋಮೀಟರ್ಗಳು ಮತ್ತು ಬ್ರೀತ್ ಅನಾಲೈಸರ್ಗಳನ್ನು ಹೊಂದಿರಬೇಕು. ಅಲ್ಲದೆ ತಮ್ಮ ಚಾಲಕರನ್ನು ನಿಗದಿತವಾಗಿ ಈ ಎಲ್ಲಾ ಪರೀಕ್ಷೆಗೆ ಒಳಪಡಿಸಬೇಕು. ಈ ರೀತಿ ಮಾಡುವುದರಿಂದ ಚಾಲಕರು ಸಹ ಎಚ್ಚರದಿಂದ ಕೆಲಸ ನಿರ್ವಹಿಸುತ್ತಾರೆ ಅಂತ ರವಿಕಾಂತೇಗೌಡ ರವರು ಹೇಳಿದರು.
ಇದರ ಜೊತೆಗೆ ಬಿಬಿಎಂಪಿ ಕಸದ ಲಾರಿಗಳಲ್ಲಿ ಸ್ಪೀಡ್ ಕಂಟ್ರೋಲ್ರನ್ನ ಅಳವಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಲಹೆ ನೀಡಿದ್ದರು. ನಗರದ ರಸ್ತೆಗಳಲ್ಲಿ ವೇಗದ ಮಿತಿ ಗಂಟೆಗೆ 40 ಕಿ.ಮೀ ಇದ್ದು, ಈ ಸ್ಪೀಡ್ ಕಂಟ್ರೋಲರ್ ಅಳವಡಿಸುವುದರಿಂದ ಚಾಲಕರು ಸಹ ಅತಿ ವೇಗದ ಚಲಾವಣೆ ಮಾಡುವುದನ್ನ ತಡೆಯಬಹುದಾಗಿದೆ ಅಂತ ರವಿಕಾಂತೇಗೌಡ ಹೇಳಿದ್ದಾರೆ.
ಸದ್ಯ ನಿನ್ನೆ ನಗರದಲ್ಲಿ ಕಸದ ಲಾರಿಗಳು ಚಾಲನೆ ಮಾಡುವ ಸಂದರ್ಭದಲ್ಲಿಯೇ ಸಂಚಾರಿ ಪೊಲೀಸರು ಕಾರ್ಯಾಚರೆಣೆ ನಡೆಸಿದ್ದು, ನಗರದ ಪೂರ್ವ ಭಾಗದಲ್ಲಿ 353, ಪಶ್ಚಿಮದಲ್ಲಿ 258 ಮತ್ತು ಉತ್ತರದಲ್ಲಿ 51 ವಾಹನಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚಾಲನಾ ಪರವಾನಿಗೆ ಮತ್ತು ಗಾಡಿಗೆ ಸಂಬಂಧಿಸಿದ ಸರಿಯಾದ ದಾಖಲೆಗಳಿಲ್ಲದೆ, ನಗರದಲ್ಲಿ ಸಂಚರಿಸಿದ 9 ಬಿಬಿಎಂಪಿ ವಾಹನಗಳನ್ನ ಪೊಲೀಸರು ವಸಪಡಿಸಿಕೊಂಡಿದ್ದಾರೆ.
ಈಗಲಾದರೂ ಬಿಬಿಎಂಪಿ ಕಠಿಣ ಕ್ರಮ ಕೈಗೊಂಡು ಅಮಾಯಕರ ಜೀವ ಉಳಿಸಬೇಕಿದೆ. ಕೇವಲ ಒಂದು ತಿಂಗಳಲ್ಲೇ ಮೂರು ಜೀವಗಳು ಕಸದ ಲಾರಿಗೆ ಬಲಿಯಾಗಿದೆ. ಹೀಗಾಗಿ ಇನ್ನು ಮುಂದೆ ಆದರೂ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ತೆಗದುಕೊಳ್ಳಬೇಕಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada