ನಮ್ಮ ಕಾಲದ ಮಹಾನ್ ಕಲಾವಿದರಾಗಿ ಪ್ರಸಿದ್ದರಾಗಿದ್ದ ಬಿ.ಕೆ. ಎಸ್. ವರ್ಮಾ ಇಂದು ನಮ್ಮನ್ನಗಲಿದ್ದಾರೆ. ಇಂದು ಎಲ್ಲೆಲ್ಲಿಯೂ ಶೋಭಿಸುತ್ತಿರುವ ಕನ್ನಡ ಮಾತೆಯನ್ನು ಚಿತ್ರಿಸಿದವರು ಸಹಾ ಈ ಬಿ ಕೆ ಎಸ್ ವರ್ಮಾ.
ಬಿ.ಕೆ. ಎಸ್ ವರ್ಮಾ 1949ರ ಸೆಪ್ಟೆಂಬರ್ 5ರಂದು ಬೆಂಗಳೂರು ಜಿಲ್ಲೆಯ ಅತ್ತಿಗುಪ್ಪೆ ಬಳಿಯಲ್ಲಿ ಜನಿಸಿದರು. ತಂದೆ ಕೃಷ್ಣಮಾಚಾರ್ಯ. ತಾಯಿ ಜಯಲಕ್ಷ್ಮಿ. ಬುಕ್ಕಸಾಗರದ ಕೃಷ್ಣಮಾಚಾರ್ಯ ಶ್ರೀನಿವಾಸ ಎಂದಾಗಬೇಕಿದ್ದವರು ಬಿ.ಕೆ.ಎಸ್. ವರ್ಮಾ ಆದದ್ದು ಕಲಾಲೋಕದ ಮಹತ್ವದ ಸಂಭವವೇ ಸರಿ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮರ ಕಲಾಕೃತಿಗಳನ್ನು ಆರಾಧ್ಯಭಾವದಿಂದ ಅನುಭಾವಿಸಿದ ಶ್ರೀನಿವಾಸ ಎಂಬ ಅಂದಿನ ಹುಡುಗನ ಹೃದಯದಲ್ಲಿ, ನಾನೂ ಇಂಥಾ ಕಲಾವಿದನಾಗಬೇಕು ಎಂಬ ಸಂಕಲ್ಪ ಮಿಂಚಿ, ಆ ಹೆಸರಿಗೆ ವರ್ಮಾ ಎಂಬ ಹೆಸರಿನ ಸೇರ್ಪಡೆಯೂ ನಿರ್ಧಾರವಾಗಿಹೋಯಿತು. ಫಲವತ್ತಾದ ಕಲಾವಂತಿಕೆಯ ಹೃದಯದಲ್ಲಿ ಮೂಡಿದ ಆ ಭಿತ್ತನೆ ಇಂದು ಮಹಾನ್ ಕಲಾವೃಕ್ಷವಾಗಿ ಬಿ.ಕೆ.ಎಸ್. ವರ್ಮಾ ಎಂಬ ಹೆಸರಿನಿಂದ ಕಲಾಲೋಕವನ್ನು ವಿಸ್ಮಯಗೊಳಿಸುತ್ತಾ ಸಾಗಿತು.“ಇದ್ದುದನ್ನು ಇರುವ ಹಾಗೇ ಬರೆಯುವುದು ಚಾರ್ಟ್, ಅದನ್ನು ಅನುಭವಿಸಿ ಬರೆಯುವುದು ಆರ್ಟ್” ಎಂಬುದು ಬಿ.ಕೆ.ಎಸ್. ವರ್ಮಾ ಅವರು ಹೇಳುತ್ತಿದ್ದ ಮಾತು. ವರ್ಮಾ ಅವರಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ತೀವ್ರ ಆಕರ್ಷಣೆಯಿತ್ತು. ಹೆತ್ತ ತಾಯಿ ತಂದೆಯರಿಗೆ ಮಗ ಇಂಜಿನಿಯರ್ ಡಾಕ್ಟರ್ ಆಗಬೇಕು ಎಂಬ ಹಂಬಲ. ಆದರೆ ಈ ಮಗನೋ ಬಿಳಿ ಶರ್ಟು, ಬಿಳಿ ಗೋಡೆ ಹೀಗೆ ಏನೇ ಕಂಡರೂ ಇದ್ದಿಲಿನಿಂದ ಚಿತ್ರ ಬಿಡಿಸಿ ಶಿಕ್ಷಕರು ಮತ್ತು ನೆರೆಹೊರೆಯವರಿಂದ ಬೈಗುಳ ತಿನ್ನುತ್ತಿದ್ದ. ಮನೆಯಲ್ಲಿ ಕೂಡಿಹಾಕಿದರೆ ಮನೆಯ ಕೋಣೆಯ ಇಂಚಿಂಚೂ ಚಿತ್ರಗಳು ತುಂಬಿಹೋದವು. ಹೀಗೆ ಕಲೆಯನ್ನು ಅಂತರಂಗದಲ್ಲಿ ತುಂಬಿಕೊಂಡು, ಅದನ್ನು ಆಸ್ವಾದಿಸಲು ಮತ್ತು ಅರ್ಥ ಮಾಡಿಕೊಳ್ಳಲು ಬಿ.ಕೆ. ಎಸ್. ವರ್ಮರು ಮನೆ ಬಿಟ್ಟು ಹೊರಟಾಗ ಅವರಿಗೆ ಕೇವಲ ಎಂಟು ವರ್ಷ ವಯಸ್ಸು. ಓದು ನಿಂತು ಹೊದ್ದದ್ದು ಮೂರನೆಯ ತರಗತಿಗೆ. ಮಹಾನ್ ಕಲಾವಿದರಾದ ಶ್ರೀ ಎ.ಸಿ.ಹೆಚ್. ಆಚಾರ್ಯ ಮತ್ತು ಅ.ನ..ಸುಬ್ಬರಾಯರ ಪ್ರಭಾವವನ್ನು ಪಡೆದು ಡಿಪ್ಲೊಮಾ ಗಳಿಸಿದ್ದು ಮುಂದಿನ ದಿನಗಳಲ್ಲಿ. ‘ಪ್ರಜಾಮತ’ ವಾರಪತ್ರಿಕೆಯಲ್ಲಿ ಚಿತ್ರಕಲಾವಿದನಾಗಿ ವೃತ್ತಿ ಮಾಡಿದ್ದರು. 15ರ ಎಳೆ ಹರಯದಲ್ಲಿಯೇ ಹಿಂದಿಯ ‘ಆದ್ಮಿ’ ಚಲನಚಿತ್ರಕ್ಕೆ ಸಹಾಯಕ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: