ಲೋಕಸಭಾ ಚುನಾವಣೆ ಇರುವ ಮುನ್ನ ಭಾರತ್ ಜೋಡೋ ಯಾತ್ರೆಗೆ ಬಹುತೇಕ ಕಡೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಪಾದಾಯಾತ್ರೆ ಹೋದ ಕಡೆಯಲೆಲ್ಲಾ ಸಾವಿರಾರು ಜನರು ಸೇರಿದ್ದಾರೆ. ರಾಹುಲ್ ಗಾಂಧಿ ಜೊತೆ ಸಾವಿರಾರು ಜನ ಹೆಜ್ಜೆ ಹಾಕಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಭಾನುವಾರ ಅಂತ್ಯಗೊಂಡಿದ್ದು ಇಂದು ಸಮಾರೋಪ ಸಮಾರಂಭ ನಡೆದಿದೆ.
ಸೆಪ್ಟಂಬರ್ 7ರಂದು ದಕ್ಷಿಣ ತುದಿ ಕನ್ಯಾಕುಮಾರಿಯಿಂದ ಆರಂಭಗೊಂಡ ಪಾದಯಾತ್ರೆ 12 ರಾಜ್ಯಗಳಲ್ಲಿ ಸಂಚರಿಸಿ ಉತ್ತರ ತುದಿ ಕಾಶ್ಮೀರದಲ್ಲಿ ಮುಕ್ತಾಯಗೊಂಡಿತ್ತು.ಶ್ರೀ ನಗರದ ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜ ಆರೋಹಣ ಮಾಡಿದ್ದು ಯಾತ್ರೆಗೆ ಫೈನಲ್ ಟಚ್ ಕೊಟ್ಟಿದ್ದಾರೆ. ಹಾಗೆ ಇಂದಿನ ಸಮಾರೋಪ ಸಮಾರಂಭಕ್ಕೆ ಘಟಾನುಘಟಿಗಳು ಭಾಗಿಯಾಗಲಿದ್ದಾರೆ.
ಭಾರತ್ ಜೋಡೋ ಯಾತ್ರೆ ಜಮ್ಮು ಕಾಶ್ಮೀರಕ್ಕೆ ಜನವರಿ 20ರಂದು ಕಾಲಿಟ್ಟಿತು. ಕಠುವಾ ಜಿಲ್ಲೆಯಿಂದ ಆರಂಭವಾಗಿ ಕಾಶ್ಮೀರದಲ್ಲಿ ಪಾದಯಾತ್ರೆ 8-9 ದಿನಗಳ ಕಾಲ ನಡೆಯಿತು. ಈ ಮಧ್ಯೆ ಲಾಲ್ ಚೌಕ್ನಲ್ಲಿ ರಾಹುಲ್ ಗಾಂಧಿ ಯಾಕೆ ರಾಷ್ಟ್ರಧ್ವಜ ಹಾರಿಸಿಲ್ಲ ಎಂದು ಕೆಲ ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಕೂಗೆಬ್ಬಿಸಿದರು. ಆದರೆ, ಇಂದು ಲಾಲ್ ಚೌಕ್ನಲ್ಲಿ ತ್ರಿವರ್ಣ ಬಾವುಟ ಹಾರಿಸುವ ಮೂಲಕ ರಾಹುಲ್ ಗಾಂಧಿ ತಮ್ಮ ಟೀಕಾಕಾರರನ್ನು ಸುಮ್ಮನಾಗಿಸುವಲ್ಲಿ ಯಶಸ್ವಿಯಾದರು.
ಹಲವು ನಾಯಕರ ಸಮಾಗಮ
ಭಾರತ್ ಜೋಡೋ ಯಾತ್ರೆ ಸೆಪ್ಟಂಬರ್ 7ರಂದು ಆರಂಭವಾಗಿ ಒಟ್ಟು 150 ದಿನಗಳ ಕಾಲ 12 ರಾಜ್ಯಗಳಾದ್ಯಂತ ಸಾಗಿ ಹೋಗಿದೆ. ಒಟ್ಟು 4 ಸಾವಿರ ಕಿಮೀಯಷ್ಟು ದೂರ ಯಾತ್ರೆ ಸಾಗಿದೆ. ನೂರಾರು ನಾಯಕರು, ಸಾವಿರಾರು ಕಾರ್ಯಕರ್ತರು, ಲಕ್ಷಾಂತರ ಜನರು ಈ ಯಾತ್ರೆಯನ್ನು ಕಂಡಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೊದಲಾದ ಮುಖಂಡರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.
ಎನ್ಡಿಎಯೇತರ 21 ರಾಜಕೀಯಪಕ್ಷಗಳಿಗೆಆಹ್ವಾನ
ಭಾರತ್ ಜೋಡೋ ಯಾತ್ರೆಯ ಸಮಾರೋಪಕ್ಕೆ ಕಾಂಗ್ರೆಸ್ ಪಕ್ಷ ಬಹುತೇಕ ವಿಪಕ್ಷಗಳಿಗೆ ಆಹ್ವಾನ ನೀಡಿದೆ. ಆಮ್ ಆದ್ಮಿ, ತೆಲಂಗಾಳ ರಾಷ್ಟ್ರೀಯ ಸಮಿತಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ 21 ರಾಜಕೀಯ ಪಕ್ಷಗಳಿಗೆ ಆಮಂತ್ರಣ ಹೋಗಿದೆ. ಆದರೆ, ಎಐಎಡಿಎಂಕೆ, ವೈಎಸ್ಆರ್ ಕಾಂಗ್ರೆಸ್, ಬಿಜೆಡಿ, ಎಐಎಂಐಎಂ, ಎಐಯುಡಿಎಫ್ ಈ ಐದು ರಾಜಕೀಯ ಪಕ್ಷಗಳಿಗೆ ಕಾಂಗ್ರೆಸ್ ಆಹ್ವಾನ ನೀಡಿಲ್ಲ.
ಇಂದಿನಕಾರ್ಯಕ್ರಮಗಳೇನು?
ನಿನ್ನೆ ಪಾದಯಾತ್ರೆ ಮುಕ್ತಾಯವಾಗಿದೆ. ಇಂದು ಶ್ರೀನಗರ್ನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಮುಖ್ಯಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದ ಮೂಲಕ ಭಾರತ್ ಜೋಡೋ ಯಾತ್ರೆ ಅಧಿಕೃತವಾಗಿ ತೆರೆಬೀಳಲಿದೆ. ಅದಾದ ಬಳಿಕ ಇದೇ ನಗರದಲ್ಲಿರುವ ಶೇರ್-ಎ-ಕಾಶ್ಮೀರ್ ಸ್ಟೇಡಿಯಂನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಹಾಗೂ ಇತರ ಹಲವು ರಾಜಕೀಯ ಪಕ್ಷಗಳ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
https://play.google.com/store/apps/details?id=com.speed.newskannada