ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ, ಎಲ್ಲೋ ಕೂತು ನಡೆಯುವ ಸೈಬರ್ ವಂಚನೆಯನ್ನು ಭೇಧಿಸುವುದು ಮಾತ್ರ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಸೈಬರ್ ಖದೀಮರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ.
ಇದೀಗ ಇಂಥದ್ದೇ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದ ವಿಶಾಖಪಟ್ಟಣ ಸಮೀಪದ ವಿಶಾಲಾಕ್ಷಿ ನಗರದಲ್ಲಿ ವರದಿಯಾಗಿದೆ.
ಆನ್ಲೈನ್ನಲ್ಲಿ ಅಮಾಯಕರನ್ನು ಟಾರ್ಗೆಟ್ ಮಾಡುವ ಒಂದು ಗುಂಪಿದ್ದು, ಅವರ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. 100 ರೂಪಾಯಿ ಆಸೆಗೆ ಬಿದ್ದ ಮಹಿಳೆಯೊಬ್ಬಳು ಬರೋಬ್ಬರಿ 5.42 ಲಕ್ಷ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಳೆ. ವಾಟ್ಸ್ಆಯಪ್ನಲ್ಲಿ ಬಂದ ಮೆಸೇಜ್ ನಂಬಿದ ಮಹಿಳೆ ಪಂಗನಾಮ ಹಾಕಿಕೊಂಡಿದ್ದಾಳೆ.
ವಿವರಣೆಗೆ ಬರುವುದಾದರೆ, ವಿಶಾಲಾಕ್ಷಿ ನಗರದ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ, ವಾಟ್ಸ್ಆಯಪ್ ಮೆಸೇಜ್ ಒಂದನ್ನು ಸ್ವೀಕರಿಸುತ್ತಾಳೆ. ಅದರಲ್ಲಿ ಮನೆಯಲ್ಲೇ ಕುಳಿತು ಪಾರ್ಟ್ ಟೈಂ ಜಾಬ್ ಮಾಡಬಹುದು ಮತ್ತು ಒಳ್ಳೆಯ ಹಣ ಗಳಿಸಬಹುದು ಎಂಬ ಸಂದೇಶ ಇರುತ್ತದೆ. ಆರಂಭದಲ್ಲಿ ಮಹಿಳೆ ಇದನ್ನು ನಂಬುವುದಿಲ್ಲ. ಆದರೆ, ನಂತರದಲ್ಲಿ ಮತ್ತೆ ಸಂದೇಶ ಕಳುಹಿಸುವ ಸೈಬರ್ ವಂಚಕರು ಆಕೆಯನ್ನು ನಂಬಿಕೆ ಎಂಬ ಬಲೆಗೆ ಬೀಳಿಸಿಕೊಳ್ಳುತ್ತಾರೆ.
ನಾವು ಕಳುಹಿಸುವ ವಿಡಿಯೋ ಲಿಂಕ್ ಓಪನ್ ಮಾಡಿ ಲೈಕ್ ಮತ್ತು ಸಬ್ಸ್ಕ್ರೈಬ್ ಮಾಡಿದರೆ ಒಂದು ವಿಡಿಯೋಗೆ 100 ರೂಪಾಯಿ ಕೊಡುತ್ತೇವೆ ಎಂದು ನಂಬಿಸುತ್ತಾರೆ. ಆರಂಭದಲ್ಲಿ ನಾಲ್ಕು ವಿಡಿಯೋಗೆ ಮಹಿಳೆ ಲೈಕ್ ಮಾಡುತ್ತಾಳೆ. ಇದಾದ ತಕ್ಷಣ ಆಕೆಯ ಬ್ಯಾಂಕ್ ಖಾತೆಗೆ 400 ರೂ. ಜಮಾ ಆಗುತ್ತದೆ. ಇದರಿಂದ ಆಕೆಯ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ. ಇದಾದ ಬಳಿಕ ಸೈಬರ್ ವಂಚಕರ ಪ್ಲಾನ್ ಟೆಲಿಗ್ರಾಮ್ಗೆ ಸ್ಥಳಾಂತರವಾಗುತ್ತದೆ.
ಈ ಬಾರಿ ನಾವು ಹೇಳಿದ ಕೆಲಸ ಮಾಡಿದರೆ ಹೆಚ್ಚಿನ ಹಣ ಸಿಗುತ್ತದೆ ಎನ್ನುತ್ತಾರೆ. ನಾವು ಹೇಳಿದ ಖಾತೆಗೆ 54 ಸಾವಿರ ರೂ. ಹಣ ಹಾಕಿದರೆ, ನಿಮಗೆ 72 ಸಾವಿರ ರೂ. ವಾಪಸ್ ಬರುತ್ತದೆ ಎಂದು ನಂಬಿಸುತ್ತಾರೆ. ಅವರು ಹೇಳಿದಂತೆ 54 ಸಾವಿರ ರೂ. ಹಣವನ್ನು ಬ್ಯಾಂಕ್ ಖಾತೆಗೆ ಮಹಿಳೆ ಜಮಾ ಮಾಡುತ್ತಾಳೆ. ಆಕೆಯ ನಂಬಿಕೆಯನ್ನು ಗಳಿಸುವ ಸಲುವಾಗಿ ಸೈಬರ್ ವಂಚಕರು ವಾಪಸ್ ಆಕೆಯ ಖಾತೆಗೆ 72 ಸಾವಿರ ರೂ. ಹಣವನ್ನು ಕ್ರೆಡಿಟ್ ಮಾಡುತ್ತಾರೆ.
ಯಾವಾಗ ತನ್ನ 72 ಸಾವಿರ ರೂ. ಹಣ ಬಂತೋ ಮಹಿಳೆ ನಂಬಿಕೆ ಮುಗಿಲು ಮುಟ್ಟಿರುತ್ತದೆ. ಆದರೆ, ನಂತರದಲ್ಲಿ ನಡೆದಿದ್ದೆಲ್ಲ ಅದಕ್ಕೆ ವಿರುದ್ಧವಾಗಿದೆ. ಇನ್ನಷ್ಟು ಟಾಸ್ಕ್ಗಳು ಅಂತಾ ಹೇಳಿ, ಮಹಿಳೆಯಿಂದ ಸುಮಾರು 5.42 ಲಕ್ಷ ರೂ. ಹಣವನ್ನು ಸೈಬರ್ ವಂಚಕರು ಡೆಪಾಸಿಟ್ ಮಾಡಿಸಿಕೊಳ್ಳುತ್ತಾರೆ. ಇದಾದ ಬಳಿಕ ಖದೀಮರು ಮಹಿಳೆಗೆ ಯಾವುದೇ ಮೆಸೇಜ್ ಕಳುಹಿಸುವುದೇ ಇಲ್ಲ. ಆಕೆಯ ಮೆಸೇಜ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಇದರಿಂದ ಅನುಮಾನಗೊಂಡು ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ಸಂತ್ರಸ್ತ ಮಹಿಳೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ.
ಸದ್ಯ ಈ ಸೈಬರ್ ವಂಚನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರಿಮಿನಲ್ಗಳು ಉದ್ಯೋಗದ ಹೆಸರಿನಲ್ಲಿ ವಂಚನೆ ಎಸಗುತ್ತಿದ್ದು, ಎಲ್ಲರೂ ಜಾಗೃತರಾಗಿರಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಂತಹ ಸಂದೇಶಗಳು ಬಂದರೆ ದೂರು ದಾಖಲಿಸುವಂತೆ ಸೂಚಿಸಲಾಗಿದೆ. ನಂಬಿ ಮೋಸ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ.
https://play.google.com/store/apps/details?id=com.speed.newskannada