ಬೀದರ್:ಮಾಲಿನ್ಯ ಸಂಬಂಧಿ ನಿಯಮ ಉಲ್ಲಂಘಿಸಿದ ಘಟಕಗಳನ್ನು ಬಂದ್ ಮಾಡುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ನೀಡಿದ ನಂತರವೂ ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿನ ಹಲವು ರಾಸಾಯನಿಕ ಘಟಕಗಳು ನಿಯಮ, ಕಾನೂನು ಉಲ್ಲಂಘನೆ ಮುಂದುವರೆಸಿವೆ.
ರಾಸಾಯನಿಕ ತ್ಯಾಜ್ಯಗಳನ್ನು ನೇರವಾಗಿ ನಾಲೆಗೆ ಸುರಿದಿದ್ದರಿಂದ ನಿಂಬೂರು ನಾಲೆಯಲ್ಲಿನ ಮೀನು, ಹಾವು ಮತ್ತಿತರ ಜಲಚರಗಳು ಮೃತಪಟ್ಟಿವೆ. ನಾಲೆಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ನೊರೆ ತುಂಬಿಕೊಂಡಿದೆ. ನಾಲೆ ಸುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹೆಚ್ಚಿದೆ.
ಮಾಣಿಕನಗರ ನಾಲೆಯು ಹುಮನಾಬಾದ್, ಹುಡಗಿ, ಮದ್ದರಗಾಂವ್, ನಿಂಬೂರು, ಬೋತಗಿ, ಮರಕಲ್ ಮೂಲಕ ಕಾರಂಜಾ ಜಲಾಶಯ ಸೇರುತ್ತದೆ. ಬೀದರ್ ನಗರ ಸೇರಿದಂತೆ ಹಲವು ಪಟ್ಟಣ, ಗ್ರಾಮಗಳಿಗೆ ಕಾರಂಜಾ ಜಲಾಶಯದಿಂದಲೇ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ರಾಸಾಯನಿಕ ತ್ಯಾಜ್ಯಗಳು ಜಲಾಶಯ ಸೇರಿದ್ದಲ್ಲಿ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಮಾಣಿಕನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ನಿಂಬೂರು ಬಳಿಯ ನಾಲೆಯ ನೀರೂ ಕಲುಷಿತಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
`ನಾಲೆಯಲ್ಲಿನ ಮೀನು, ಹಾವು ಮತ್ತಿತರ ಜಲಚರಗಳು ಸತ್ತಿವೆ. ದುರ್ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ, ನಿಂಬೂರು ಗ್ರಾಮ ಪಂಚಾಯತಿ ಸದಸ್ಯ ಸಾಯಿನಾಥ ನಾಗರಾಳೆ.
ನಿಂಬೂರು ನಾಲೆಯಿಂದಾಗಿ ಸುತ್ತಲಿನ ಬಾವಿ, ಬೋರ್ವೆಲ್ಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಗ್ರಾಮದ ಜಾನುವಾರುಗಳು ಇದೇ ನಾಲೆಯ ನೀರು ಕುಡಿಯುತ್ತವೆ. ಮಲಿನಗೊಂಡಿರುವ ನೀರು ಕುಡಿದಲ್ಲಿ ಜಾನುವಾರುಗಳಿಗೆ ಪ್ರಾಣಾಪಾಯ ಸಂಭವಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಜಲಚರಗಳ ಸಾವು ಕುರಿತು ಜಿಲ್ಲಾಧಿಕಾರಿಯವರಿಗೆ, ಸಹಾಯಕ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ತಹಸೀಲ್ದಾರರು ನಾಲೆಯ ನೀರನ್ನು ಪರೀಕ್ಷೆಗೆ ಕೊಂಡೊಯ್ದಿದ್ದಾರೆ ಎಂದು ಸಾಯಿನಾಥ ಮಾಹಿತಿ ನೀಡಿದ್ದಾರೆ.
ಕಾನೂನು ಉಲ್ಲಂಘನೆಗಿಲ್ಲ ಕಠಿಣ ಶಿಕ್ಷೆ
ಪರಿಸರ ಸಂಬಂಧಿ ನಿಯಮ ಪಾಲನೆ ಮಾಡದ ಘಟಕಗಳ ವಿರುದ್ಧ ಮಾಣಿಕನಗರ ಮತ್ತಿತರ ಗ್ರಾಮಸ್ಥರ ಹೋರಾಟ ನಡೆಯುತ್ತಲೇ ಇದೆ. ಈಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಭೇಟಿ ನೀಡಿದ್ದರು. ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪರಿಸರ ಸಂಬಂಧಿ ನಿಯಮ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಆದರೂ, ಮಾಲಿನ್ಯ ಮುಂದುವರೆದಿದೆ. ಗಡವಂತಿ ನಾಲೆಯಲ್ಲಿ ಹಸಿರುಗಪ್ಪು, ಹಳದಿ ನೀರು, ನೊರೆ ತುಂಬಿಕೊಂಡಿದೆ.
ಇದೀಗ ಮಾಣಿಕನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ನಿಂಬೂರು ನಾಲೆಯ ನೀರೂ ಮಲಿನವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: