ಬೈಕ್, ಆಟೊಗೆ ನಿಷೇಧಕ್ಕೆ ಆಕ್ರೋಶ

ಹತ್ತು ಪಥಗಳ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಮುಕ್ತಾಯಗೊಂಡ ಬಳಿಕ ಎಕ್ಸ್‌ಪ್ರೆಸ್ ವೇನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ನಿಷೇಧ ಇರಲಿದ್ದು, ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗುತ್ತಿದೆ.ಹೆದ್ದಾರಿಯಲ್ಲಿನ ಮಧ್ಯದ ಆರು ಪಥಗಳು ಎಕ್ಸ್‌ಪ್ರೆಸ್‌ವೇಗೆ ಮೀಸಲಾಗಿವೆ. ಇಲ್ಲಿ ವಾಹನಗಳ ವೇಗ ಹೆಚ್ಚಳ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಬೈಕ್‌, ಆಟೊ, ಟ್ರ್ಯಾಕ್ಟರ್‌ ಮೊದಲಾದ ವಾಹನಗಳಿಗೆ ನಿರ್ಬಂಧ ಹೇರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಇದಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹ ಸಮ್ಮತಿ ಸೂಚಿಸಿದ್ದಾರೆ.ಸದ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಇನ್ನೂ ಸರ್ವೀಸ್ ರಸ್ತೆ ಕಾಮಗಾರಿಗಳು ನಡೆದಿವೆ. ಈ ಎಲ್ಲ ಕಾಮಗಾರಿ ಮುಕ್ತಾಯಗೊಂಡ ಬಳಿಕವಷ್ಟೇ. ಈ ‘ನಿಷೇಧ’ ಆದೇಶವು ಜಾರಿಗೆ ಬರಲಿದೆ. ಈ ನಿರ್ಧಾರವು ಅನುಷ್ಠಾನಕ್ಕೆ ಬಂದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ಹೆದ್ದಾರಿ ಇದಾಗಲಿದೆ.ಜನಸಾಮಾನ್ಯರ ವಿರೋಧ: ಹೊಸ ಹೆದ್ದಾರಿಯಲ್ಲಿ ಒಂದು ವೇಳೆ ದ್ವಿಚಕ್ರ ವಾಹನಗಳ ಓಡಾಟಕ್ಕೆ ನಿಷೇಧ ಹೇರಿದಲ್ಲಿ ಅದು ಶ್ರೀಮಂತರ ಹೆದ್ದಾರಿ ಆಗಲಿದೆ. ಹೆದ್ದಾರಿ ಅಭಿವೃದ್ಧಿಯಿಂದ ಬಡಜನರಿಗೆ ಯಾವ ಉಪಯೋಗವೂ ಆಗದು ಎಂಬುದು ಸಾರ್ವಜನಿಕರ ಆಕ್ಷೇಪ.’ಈಗಾಗಲೇ ಹೆದ್ದಾರಿಗಾಗಿ ನಮ್ಮ ಊರಿನ ಜಮೀನು, ರಸ್ತೆ ಬದಿಯ ಮನೆಗಳನ್ನು ಕಳೆದುಕೊಂಡಿದ್ದೇವೆ. ಹೀಗಿರುವಾಗ ಸ್ಥಳೀಯರಿಗೆ ನಮ್ಮದೇ ಊರಿನ ಎಕ್ಸ್‌ಪ್ರೆಸ್‌ವೇನಲ್ಲಿ ಓಡಾಟಕ್ಕೆ ನಿಷೇಧ ಹೇರುವುದು ಸರಿಯಲ್ಲ. ಕೇವಲ ಶ್ರೀಮಂತರು- ಉದ್ಯಮಿಗಳ ಓಡಾಟಕ್ಕಾಗಿ ಜನರ ತೆರಿಗೆ ಹಣದಲ್ಲಿ ಈ ಹೆದ್ದಾರಿ ಕಟ್ಟಿಲ್ಲ ಎಂಬುದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು’ ಎನ್ನುತ್ತಾರೆ ರಾಮನಗರ ನಿವಾಸಿ ಕಿರಣ್.ಬೆಂಗಳೂರಿನಿಂದ ರಾಮನಗರ, ಚನ್ನಪಟ್ಟಣ, ಮಂಡ್ಯಕ್ಕೆ ಬೈಕ್‌ಗಳಲ್ಲಿ ಸಾಕಷ್ಟು ಮಂದಿ ಓಡಾಡುತ್ತಾರೆ. ಅಂತಹವರ ಓಡಾಟಕ್ಕೆ ಎಕ್ಸ್‌ಪ್ರೆಸ್‌ವೇನಲ್ಲಿ ಅವಕಾಶ ನೀಡಬೇಕು. ಇತರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವಂತೆಯೇ ಇಲ್ಲಿಯೂ ಇಂತಹ ವಾಹನಗಳಿಗೆ ಟೋಲ್‌ ಮುಕ್ತ ಓಡಾಟಕ್ಕೆ ಅವಕಾಶ ನೀಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.ಪ್ರಾಧಿಕಾರದ ವಾದವೇನು?ಹೆದ್ದಾರಿಗಳಲ್ಲಿ ಸಂಭವಿಸುವ ಅಪಫಾತಗಳ ಪೈಕಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳದ್ದು ಹೆಚ್ಚಿನ ಪಾಲು ಇದೆ.ಈ ಮಾದರಿ ವಾಹನಗಳ ಸವಾರರು ಸರಿಯಾಗಿ ಲೇನ್‌ಗಳಲ್ಲಿ ಚಲಿಸುವುದಿಲ್ಲ. ಆಗಾಗ್ಗೆ ದೊಡ್ಡ ಮಾದರಿ ವಾಹನಗಳಿಗೆ ಅಡ್ಡಬರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಉಳಿದ ವಾಹನಗಳ ವೇಗವೂ ಕಡಿಮೆ ಆಗಲಿದೆ. ಹೀಗಾಗಿ ಎಕ್ಸ್‌ಪ್ರೆಸ್‌ ವೇನಲ್ಲಿ ಇವುಗಳಿಗೆ ನಿಷೇಧ ಹೇರಿ, ಸರ್ವೀಸ್ ರಸ್ತೆಗಳಲ್ಲಿ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎನ್ನುತ್ತಾರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಇನ್ನಿಲ್ಲ

Tue Jan 10 , 2023
ಕನ್ನಡದ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್(86) ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರೋದಾಗಿ ತಿಳಿದು ಬಂದಿದೆ.ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ( Writer Sara Aboobacker No More ) ಅವರು, ಇಂದು ತಮ್ಮ ಮಂಗಳೂರಿನ ನಿವಾಸದಲ್ಲಿ ನಿಧನರಾಗಿರೋದಾಗಿ ತಿಳಿದು ಬಂದಿದೆ.ಗಡಿನಾಡು ಕಾಸರಗೂಡಿನಲ್ಲಿ 1936, ಜೂನ್ 30ರಂದು ಹುಟ್ಟಿದಂತ ಅವರು, ಮಹಿಳಾ ಸಮಾನತೇ, ಸಬಲೀಕರಣ ಸೇರಿದಂತೆ ವಿವಿಧ ಚಿಂತನೆಯ ಮೂಲಕ ತಮ್ಮನ್ನು ಗುರ್ತಿಸಿಕೊಂಡಿದ್ದರು.ಇವರು […]

Advertisement

Wordpress Social Share Plugin powered by Ultimatelysocial