ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಇನ್ನು ಅಂತಿಮಗೊಂಡಿಲ್ಲ. ಸಮೀಕ್ಷೆಗಳು ನಡೆದಿದ್ದು, ಸಮೀಕ್ಷಾ ವರದಿಯನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ತಮಗೆ ಟಿಕೆಟ್ ಎಂದು ಬೀಗುತ್ತಿದ್ದ ಆಕಾಂಕ್ಷಿಗಳಿಗೆ ಒಂದು ರೀತಿಯ ಶಾಕ್ ಕೊಟ್ಟಿದೆ.
ಕೆಲ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ, ತಮಗೆ ಟಿಕೆಟ್ ಎಂದು ಹೇಳಿಕೊಂಡು ಓಡಾಡುತ್ತಿದ್ದವರಿಗೆ ಮುಖ್ಯಮಂತ್ರಿಗಳ ಹೇಳಿಕೆ ಬಿಸಿ ಮುಟ್ಟಿಸಿದೆ.ಸಮೀಕ್ಷೆ ವರದಿಯ ಮೇಲೆ ಟಿಕೆಟ್ ನೀಡುವ ಅವರ ಮಾತು ತಮಗೆ ಟಿಕೆಟ್ ಎಂಬ ನಿರೀಕ್ಷೆಯಲ್ಲಿದ್ದ ಕೆಲವರನ್ನು ಗೊಂದಲಕ್ಕೆ ದೂಡಿದೆ. ಹಾಗೆಯೇ ಈ ಬಾರಿ ಚುನಾವಣಾ ಟಿಕೆಟ್ ನೀಡಿಕೆ ಸಂದರ್ಭದಲ್ಲಿ ಗುಜರಾತ್ ಮಾದರಿಯನ್ನು ಅನುಸರಿಸಲಾಗುತ್ತದೆ. ಹಾಲಿ ಶಾಸಕರಲ್ಲಿ ಹಲವರಿಗೆ ಟಿಕೆಟ್ ಕೈ ತಪ್ಪಲಿದೆ. ಜತೆಗೆ ಹಿರಿಯ ಶಾಸಕರಿಗೆ ಟಿಕೆಟ್ ಸಿಗಲ್ಲ ಎಂಬ ಮಾತುಗಳು ಬಿಜೆಪಿಯಲ್ಲಿ ಮುನ್ನಲೆಗೆ ಬಂದಿರುವಾಗಲೇ ಮುಖ್ಯಮಂತ್ರಿಗಳು ಸಮೀಕ್ಷಾ ವರದಿಯೇ ಟಿಕೆಟ್ ನೀಡಿಕೆಗೆ ಆಧಾರ ಎಂದು ಹೇಳಿರುವುದು ಹಲವು ಆಕಾಂಕ್ಷಿಗಳಿಗೆ ಆತಂಕ ಉಂಟು ಮಾಡಿದೆ.ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಇನ್ನು ಪೂರ್ಣಗೊಂಡಿಲ್ಲ. ಸಮೀಕ್ಷೆಗಳು ನಡೆಯುತ್ತಿವೆ. ಸಮೀಕ್ಷೆಗಳನ್ನು ನೋಡಿಕೊಂಡು ಗೆಲುವಿನ ಮಾನದಂಡದ ಮೇಲೆ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.ಚುನಾವಣೆಯಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಬಗ್ಗೆ ಎಲ್ಲ ನಾಯಕರು ಕುಳಿತು ಚರ್ಚಿಸಿ ಪಟ್ಟಿಯನ್ನು ಸಿದ್ದಗೊಳಿಸುವ ಕಾರ್ಯ ಇನ್ನು ಆಗಿಲ್ಲ. ಅನೌಪಚಾರಿಕವಾಗಿ ಚರ್ಚೆಗಳಾಗಿರಬಹುದು ಅಷ್ಟೆ. ಸಮೀಕ್ಷೆಗಳು ನಡೆದಿವೆ. ಸಮೀಕ್ಷೆಗಳು ಪೂರ್ಣವಾದ ನಂತರವೇ ಟಿಕೆಟ್ನ್ನು ಅಂತಿಮಗೊಳಿಸಲಾಗುವುದು. ಟಿಕೆಟ್ ನೀಡಿಕೆಯಲ್ಲಿ ಸಮೀಕ್ಷಾ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಮುಂದಿನ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಎಂಬ ಬಗ್ಗೆ ಇನ್ನು ಯಾವುದೇ ಅಧಿಕೃತ ತೀರ್ಮಾನಗಳು ಆಗಿಲ್ಲ ಎಂದು ಹೇಳಿದರು.
https://play.google.com/store/apps/details?id=com.speed.newskannada