ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ನಿನ್ನೆ ಭಾರಿ ಮಳೆಯಾಗಿದ್ದು, ನಗರಾದ್ಯಂತ ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, ಸಾವು-ನೋವಿನಂಥ ಅನಾಹುತಗಳೂ ಸಂಭವಿಸಿವೆ. ಮಳೆ ಅವಾಂತರದಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಒಂದೆಡೆಯಾದರೆ, ಆಡಳಿತ ಯಂತ್ರವೂ ಚುರುಕುಗೊಂಡಿದೆ.
ನಿನ್ನೆ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಉಲ್ಲಾಳ ಉಪನಗರದ ಉಪ್ಕಾರ್ ಲೇಔಟ್ ಬಸ್ ನಿಲ್ದಾಣದ ಬಳಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದರು. ಈ ಸ್ಥಳದಲ್ಲಿ ಕಾವೇರಿ 5ನೇ ಹಂತದ ಪೈಪ್ಲೈನ್ ಕಾಮಗಾರಿಯಲ್ಲಿ ತೊಡಗಿದ್ದ ಬಿಹಾರ ಮೂಲದ ದೇವಬಾತ್ ಮತ್ತು ಉತ್ತರಪ್ರದೇಶ ಮೂಲದ ಅಂಕಿತ್ ಕುಮಾರ್ ಮೃತಪಟ್ಟಿದ್ದರು. ತ್ರಿಲೋಕ್ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಅಷ್ಟೇ ಅಲ್ಲದೆ ನಗರಾದ್ಯಂತ ಹಲವೆಡೆ ನೀರು ನುಗ್ಗಿದ್ದು, ಅನೇಕ ಮನೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡ ಪ್ರಕರಣಗಳೂ ನಡೆದಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ನಿನ್ನೆಯ ಅವಘಡದಲ್ಲಿ ಸಾವಿಗೀಡಾದ ಇಬ್ಬರ ಕುಟುಂಬಕ್ಕೂ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಹಾಗೆಯೇ ಮಳೆಯಿಂದ ಹಾನಿಗೀಡಾಗಿರುವ ಮನೆಗಳವರಿಗೆ 25 ಸಾವಿರ ರೂ. ಪರಿಹಾರ ಕೊಡಲಾಗುವುದು ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada