ಬೆಳಗಾವಿಯ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸುವ ಬಗ್ಗೆ ಇಂದು ನಿರ್ಧಾರವಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡು ಮುಂದಿನ ಬುಧವಾರದ ನಂತರ ಮಸೂದೆ ಮಂಡನೆ ಮಾಡುವ ಸಾಧ್ಯತೆ ಹೆಚ್ಚಿದೆ.
ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ಅನುಮೋದನೆ ಸಾಧ್ಯತೆಯಿದ್ದು, ಪ್ರತಿಭಟನೆಗಳ ನಡುವೆ ವಿಧೇಯಕ ಕುರಿತ ಚರ್ಚೆಗೂ ಅನುವು ಮಾಡಿಕೊಡಬೇಕಿದೆ.ಪ್ರಸ್ತಾವಿತ ಮಸೂದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಬುದ್ಧಿಮಾಂದ್ಯರು, ಅಪ್ರಾಪ್ತರು ಮತ್ತು ಹೆಂಗಸರನ್ನು ಬಲವಂತವಾಗಿ ಮತಾಂತರ ಮಾಡಿದರೆ ಕನಿಷ್ಠ ಮೂರು ವರ್ಷದಿಂದ ಹತ್ತು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ರೂ.50 ಸಾವಿರ ದಂಡ ವಿಧಿಸಲು ಪ್ರಸ್ತಾವನೆ ಮಾಡಲಾಗಿದೆ.
ಮತಾಂತರಕ್ಕೂ ಎರಡು ತಿಂಗಳು ಮುನ್ನ ಮತಾಂತರಗೊಳ್ಳುವ ವ್ಯಕ್ತಿಯು ಈ ಕುರಿತು ನೋಟಿಸ್ ಅನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನೀಡಬೇಕಾಗುತ್ತದೆ. ಅದೇ ರೀತಿ, ಮತಾಂತರ ಮಾಡುವ ವ್ಯಕ್ತಿಯೂ ಸಹ ಈ ಬಗ್ಗೆ ಒಂದು ತಿಂಗಳಿಗೂ ಮುನ್ನ ಮ್ಯಾಜಿಸ್ಟ್ರೇಟ್ ಅವರಿಗೆ ನೋಟಿಸ್ ನೀಡಬೇಕಾಗುತ್ತದೆ.ಮತಾಂತರಗೊಂಡ ನಂತರ ವ್ಯಕ್ತಿಯು ಒಂದು ತಿಂಗಳ ಒಳಗೆ ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಮಾಹಿತಿಯನ್ನು ನೀಡಬೇಕು. ತಪ್ಪಿದಲ್ಲಿ ಮತಾಂತರಗೊಂಡವರು ಹಾಗೂ ಮತಾಂತರ ಮಾಡಿದವರು ಇಬ್ಬರೂ ಜೈಲು ಸೇರಬೇಕಾಗುತ್ತದೆ.
ಮತಾಂತರಗೊಂಡ ನಂತರ ಒಂದೊಮ್ಮೆ ಆ ವ್ಯಕ್ತಿ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಜಾತಿ, ಧರ್ಮಗಳಿಗೆ ಸೇರಿದ್ದರೆ ಅವರಿಗೆ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಮುಂತಾದವುಗಳಿಂದ ದೊರೆಯುವ ಸವಲತ್ತುಗಳನ್ನು ನಿಲ್ಲಿಸಲಾಗುತ್ತದೆ ಎಂಬ ಸುದ್ದಿಯಿದೆ.ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ಮತಾಂತರ ಕಾಯಿದೆಗಳನ್ನು ಜಾರಿಗೆ ತಂದಿದ್ದು ರಾಜ್ಯ ಸರ್ಕಾರವು ಮಂಡಿಸಲು ಉದ್ದೇಶಿಸಿರುವ ಮಸೂದೆಯೂ ಆ ರಾಜ್ಯಗಳ ಕಾನೂನಿನ ನಕಲು ಎಂದು ಹೇಳಲಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada