ಮಂಗಳೂರು, ಫೆಬ್ರವರಿ 4: ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ ಹೊಡೆದು ಮಂಗಳೂರು ಮೂಲದ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶುಕ್ರವಾರ ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಅಪಘಾತ ನಡೆದಿದೆ ಎನ್ನಲಾಗಿದೆ.
ಮಂಗಳೂರು ಮೂಲದ ಅಕೀಲ್, ನಾಸಿರ್, ರಿಝ್ವಾನ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿ ಬಳಿಯ ನಿವಾಸಿ ರಿಝ್ವಾನ್ ಅವರು ಕಳೆದ 4 ತಿಂಗಳ ಹಿಂದಷ್ಟೇ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಇವರು ಬದ್ರುದ್ದೀನ್ ಮತ್ತು ಅಲೀಮಾ ದಂಪತಿಯ ನಾಲ್ಕು ಮಂದಿ ಮಕ್ಕಳ ಪೈಕಿ ಮೂವರು ಪುತ್ರಿಯರು ಹಾಗೂ ಏಕೈಕ ಪುತ್ರನಾಗಿದ್ದಾರೆ.
ಮೃತ ಮೂವರು ಯುವಕರು ಮನೆಯ ಜವಾಬ್ದಾರಿ ನಿಭಾಯಿಸಲು ಸೌದಿ ಅರೇಬಿಯಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಬಾಂಗ್ಲಾದೇಶದ ವ್ಯಕ್ತಿಯೊಂದಿಗೆ ಅಕೀಲ್, ನಾಸಿರ್, ರಿಝ್ವಾನ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಖುರೈಸ್ ರಸ್ತೆಯ ಬಳಿ ಬಂದಾಗ ಏಕಾಏಕಿ ಒಂಟೆ ಎದುರಾಗಿದ್ದು, ಕಾರು ಒಂಟೆಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಮಂಗಳೂರಿನ ಮೂವರು ಸೇರಿದಂತೆ ಬಾಂಗ್ಲಾದೇಶದ ಯುವಕ ನಾಸಿರ್ ಎನ್ನುವಾತ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಪಘಾತದ ಬಳಿಕ ನಾಲ್ವರ ಮೃತದೇಹವನ್ನು ಸೌದಿ ಅರೇಬಿಯಾದ ಹಸ್ಸಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಸದ್ಯ ಮೃತರ ಕುಟುಂಬಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನು ಮಂಗಳೂರಿಗೆ ತರಲು ಸಕಲ ಪ್ರಯತ್ನಗಳನ್ನು ಕೂಡ ಮಾಡಲಾಗುತ್ತಿದೆ.
ಮೃತ ಅಕೀಲ್ ಮಂಗಳೂರಿನ ಬೋಳಾರ್ ನಿವಾಸಿಯಾಗಿದ್ದು, ರಿಝ್ವಾನ್ ಹಳೆಯಂಗಡಿ ಕದಿಕೆ ನಿವಾಸಿಯಾಗಿದ್ದಾರೆ. ಮತ್ತೊರ್ವನ ಮಾಹಿತಿ ಲಭ್ಯವಾಗಬೇಕಿದೆ. ಮೃತರ ಮನೆಗಳಿಗೆ ಈಗಾಗಲೇ ಸಾವಿನ ಸುದ್ದಿ ತಲುಪಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada