ನವದೆಹಲಿ: ಆಟೋ ಚಾಲಕನಿಂದ ಅಪಹರಣಕ್ಕೆ ಒಳಗಾಗುವ ಭಯದಿಂದ 28 ವರ್ಷದ ಯುವತಿಯೊಬ್ಬಳು ಚಲಿಸುತ್ತಿದ್ದ ಆಟೋದಿಂದ ಹೊರಗೆ ಜಿಗಿದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಯುವತಿಯು ಭಾನುವಾರ ಮಾರುಕಟ್ಟೆಯಿಂದ ಮನೆಗೆ ಮರಳುವಾಗ ಗುರುಗ್ರಾಮದ 22ನೇ ಸೆಕ್ಟರ್ನಲ್ಲಿ ಘಟನೆ ನಡೆದಿದೆ.
ನಡೆದ ಕಹಿ ಅನುಭವವನ್ನು ಯುವತಿ ತನ್ನ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಟ್ವಿಟರ್ ಪ್ರೊಫೈಲ್ನಲ್ಲಿರುವಂತೆ ಯುವತಿಯ ಹೆಸರು ನಿಷ್ಥಾ. ಸಂವಹನ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ತಮ್ಮ ಮನೆಯಿಂದ 7 ಕಿ.ಮೀ ದೂರದಲ್ಲಿರುವ ಮಾರುಕಟ್ಟೆಗೆ ಹೋಗಿದ್ದ ಯುವತಿ, ಬಳಿಕ ಮನೆಗೆ ಹಿಂದಿರುಗಲು ಆಟೋವೊಂದನ್ನು ಏರಿದ್ದಾರೆ.
ಸಮಯ ಮಧ್ಯಾಹ್ನ 12.30 ಆಗಿತ್ತು. ನಾನು ಪೇಟಿಎಂ ಮಾಡುವುದಾಗಿ ಆಟೋ ಚಾಲಕನಿಗೆ ಹೇಳಿದೆ. ಅದಕ್ಕೆ ಆತನು ಕೂಡ ಒಪ್ಪಿದೆ. ಬಳಿಕ ಆಟೋ ಒಳಗೆ ಕುಳಿತುಕೊಂಡೆ. ಚಾಲಕ ಜೋರು ಶಬ್ದದಲ್ಲಿ ಭಕ್ತಿಗೀತೆಯನ್ನು ಹಾಕಿದ್ದ. ನಮ್ಮ ಮನೆಗೆ ಹೋಗುವ ಕೇಂದ್ರದಲ್ಲಿ ಬಲತಿರುವು ತೆಗೆದುಕೊಳ್ಳಬೇಕಿದ್ದ ಆಟೋ ಎಡತಿರುವ ತೆಗೆದುಕೊಂಡಿತು. ಯಾಕೆ ಎಡಕ್ಕೆ ತಿರುಗಿಸಿದೆ ಎಂದು ಪ್ರಶ್ನಿಸಿದೆ. ಆದರೆ, ನನ್ನ ಮಾತನ್ನು ಕೇಳದ ಚಾಲಕ ದೇವರ ಹೆಸರನ್ನು ಜೋರಾಗಿ ಕೂಗುತ್ತಿದ್ದ. ಸುಮಾರು ಏಳರಿಂದ ಎಂಟು ಬಾರಿ ಚಾಲಕನ ಭುಜಕ್ಕೆ ಹೊಡೆದರು ಕೂಡ ಆಟೋ ನಿಲ್ಲಿಸದೇ ಮುಂದೆ ಸಾಗಿದ.
ಕಳೆದುಹೋಗುವುದಕ್ಕಿಂತ ಮುರಿದ ಮೂಳೆಗಳು ಉತ್ತಮವೆಂದು ನಾನು ಆ ಕ್ಷಣ ಭಾವಿಸಿದೆ ಮತ್ತು ಚಲಿಸುವ ಆಟೋದಿಂದ ಜಿಗಿದೆ. ನನಗೆ ಆ ಧೈರ್ಯ ಹೇಗೆ ಬಂತು ಎಂದು ನನಗೆ ತಿಳಿದಿಲ್ಲ. ಸಣ್ಣಪುಟ್ಟ ಗಾಯಗಳಾಯಿತು. ಆದರೆ, ಎದ್ದು ನಿಂತು ಮನೆ ಕಡೆ ಹೆಜ್ಜೆ ಹಾಕಿದೆ. ಚಾಲಕ ನನ್ನನ್ನು ಹಿಂಬಾಲಿಸುತ್ತಿದ್ದಾನಾ ಎಂದು ಹಿಂದೆ ತಿರುಗಿ ನೋಡಿಕೊಂಡೆ ಮನೆಯ ಕಡೆ ನಡೆದೆ. ಬಳಿಕ ಇ-ರಿಕ್ಷಾ ಆಟೋ ಹತ್ತಿಕೊಂಡು ಮನೆಗೆ ಮರಳಿದೆ. ಆತನಿಂದ ತಪ್ಪಿಸಿಕೊಂಡು ಮನೆಗೆ ಮರಳುವ ಭರದಲ್ಲಿ ಆಟೋ ನಂಬರ್ ದಾಖಲಿಸಿಕೊಳ್ಳುವುದನ್ನು ಮರೆತೆ ಎಂದು ಯುವತಿ ಹೇಳಿದ್ದಾಳೆ.
ಆಟೋ ನಂಬರ್ ದಾಖಲು ಮಾಡಿಕೊಳ್ಳದೇ ಇದುದ್ದರ ಬಗ್ಗೆ ನನಗೆ ಪಶ್ಚಾತಾಪ ಇದೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಇದೀಗ ಪಾಲ್ ವಿಹಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆದಷ್ಟು ಬೇಗ ಆರೋಪಿಯನ್ನು ಪತ್ತೆಹಚ್ಚುವುದಾಗಿ ಪೊಲೀಸರು ಯುವತಿಗೆ ಭರವಸೆ ನೀಡಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡ ಕಾರ್ಯಾಚರಣೆ ನಡೆಸುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada