ರೋಚಕ ಘಟಕ್ಕೆ ತಲುಪಿದ ಐಪಿಎಲ್
13 ನೇ ಆವೃತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ರೋಚಕ ಘಟ್ಟದತ್ತ ತಲುಪಿದೆ. ಹೆಚ್ಚಿನ ತಂಡ ಪ್ಲೇ ಆಫ್ ಹಂತದ ಲೆಕ್ಕಾಚಾರದಲ್ಲಿದ್ದು, ಪ್ಲೇ ಆಫ್ ಹಂತವನ್ನ ಜೀವಂತವಾಗಿರಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಾ ಇದೆ… ನಿನ್ನೆ ಚೆನ್ನೈ ವಿರುದ್ಧ ಪಂದ್ಯದಲ್ಲಿ ಪಂಜಾಬ್ ತಂಡ ಸೋಲುವುದರೊಂದಿಗೆ ಪ್ಲೇ ಆಫ್ ಹಂತದ ಕನಸು ಕೂಡ ಭಗ್ನಗೊಂಡಿತು.
ಮಾಡು ಇಲ್ಲವೇ ಮಡಿ ಕದನದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಸ್ಮಿತ್ ನಿರ್ಧಾರ ಆರಂಭದಲ್ಲೆ ಯಶ ಕಂಡಿತು. ಜೋಫ್ರಾ ಆರ್ಚರ್ ಮೊದಲ ಎಸೆತದಲ್ಲೇ ನಿತೇಶ್ ರಾಣಾ ರನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್ಗೆ ಅಟ್ಟಿದ್ರು. ಈ ವೇಳೆ ಜೊತೆಯಾದ ಶುಭ್ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಅರ್ಧ ಶತಕ ಸಿಡಿಸಿ ತಂಡಕ್ಕೆ ಆಸರೆಯಾದ್ರು. ಗಿಲ್ ಘರ್ಜನೆ 36 ರನ್ ಗೆ ಕೊನೆಗೊಂಡಿತು. ನಂತರ ಬಂದ ಸುನಿಲ್ ನರೈನ್ ಹಾಗೂ ದಿನೇಶ್ ಕಾರ್ತಿಕ್ ಖಾತೆ ತೆರೆಯುವ ಮೊದಲೇ ಗೂಡು ಸೇರಿದ್ರು. ರಾಹುಲ್ ತ್ರಿಪಾಠಿ 39 ರನ್ ಸಿಡಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ರು. ಈ ವೇಳೆ ಜೊತೆಯಾದ ಸ್ಫೋಟಕ ಆಟಗಾರರಾದ ಇಯಾನ್ ಮಾರ್ಗನ್ ಹಾಗು ರಸೆಲ್ ರಾಯಲ್ಸ್ ಬೌಲರ್ಗಳ ಬೆಂಡೆತ್ತಿದ್ರು. ಬೌಂಡರಿ-ಸಿಕ್ಸರ್ ಗಳ ಸುರಿಮಳೆಗೈದ ಈ ಜೋಡಿಯು ಕೆಕೆಆರ್ ರನ್ ವೇಗವನ್ನು ಹೆಚ್ಚಿಸಿತು. ರಸೆಲ್ 11 ಎಸೆತದಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 25 ರನ್ ಚಚ್ಚಿದ್ರು.ನಿನ್ನೆ ಅಕ್ಷರಶಃ ಅಬ್ಬರಿಸಿದ ಇಯಾನ್ ಮಾರ್ಗನ್ ರಾಯಲ್ಸ್ ಬೌಲರ್ ಗಳನ್ನು ಚೆಂಡಾಡಿದ್ರು. ಕಡೆತನವು ಹೋರಾಟ ನಡೆಸಿದ ಮಾರ್ಗನ್ ಕೆಕೆಆರ್ ಮೊತ್ತವನ್ನ 190 ರ ಗೆರೆ ದಾಟಿಸಿದ್ರು. 35 ಎಸೆತಗಳನ್ನು ಎದುರಿಸಿದ ಮಾರ್ಗನ್ 6 ಸಿಕ್ಸರ್ ಹಾಗೂ 5 ಬೌಂಡರಿ ನೆರವಿನಿಂದ ಅಜೇಯ 68 ರನ್ ಸಿಡಿಸಿ ಮಿಂಚಿದ್ರು.ಅಂತಿಮವಾಗಿ ಕೆಕೆಆರ್ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳ ಬೃಹತ್ ಮೊತ್ತ ಪೇರಿಸಿತು.
192 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ರಾಯಲ್ಸ್ ತಂಡವು ಸಿಕ್ಸ್ ನೊಂದಿಗೆ ಖಾತೆ ಆರಂಭಿಸಿತು. ಉತ್ತಪ್ಪ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟುವ ಮೂಲಕ ಸಿಡಿಯುವ ಸೂಚನೆ ನೀಡಿದ್ರು. ಆದರೆ ಮೊದಲ ಓವರ್ ನಲ್ಲೇ ಪ್ಯಾಟಿಸನ್ ಗೆ ಉತ್ತಪ್ಪ ವಿಕೆ್ಟ ವೊಪ್ಪಿಸಿ ಕ್ರೀಸ್ ತೊರೆದ್ರು. ನಂತರ ಸ್ಟೋಕ್ಸ್ ಹಾಗೂ ಸ್ಮಿತ್ ಕೂಡ ಪ್ಯಾಟಿಸನ್ ಗೆ ವಿಕೆಟ್ ವೊಪ್ಪಿಸಿ ಮರಳಿದ್ರು. ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ಪ್ಯಾಟಿಸನ್ ತಂಡದ ಪ್ರಮುಖ ಮೂರು ವಿಕೆಟ್ ಪಡೆದು ರಾಯಲ್ಸ್ ಗೆ ಆಘಾತ ನೀಡಿದ್ರು. ಸಂಜು ಸಾಮ್ಸನ್ ಕೂಡ ಕೇವಲ ಒಂದು ರನ್ ಗೆ ವಿಕೆಟ್ ವೊಪ್ಪಿಸಿ ನಿರಾಸೆ ಮೂಡಿಸಿದ್ರು. ರಿಯಾನ್ ಪರಾಗ್ ಕೂಡ ಖಾತೆ ತೆರೆಯುವ ಮೊದಲೇ ವಿಕೆಟ್ ವೊಪ್ಪಿಸಿ ಪೆವಿಲಿಯನ್ ದಾರಿ ಹಿಡಿದ್ರು.. ಬಟ್ಲರ್ ಕೂಡ ಸ್ವಲ್ಪ ಹೊತ್ತು ಹೋರಾಟ ನಡೆಸಿ ಬ್ಯಾಟ್ ಕೆಳಗಿಸಿಳಿಸಿದ್ರು. ಇದರಿಂದ ಕೆಕೆಆರ್ ಗೆಲ್ಲುವುದು ಪಕ್ಕಾ ಆಯಿತು.
ನಿನ್ನೆ ನಡೆದ ಮೊದಲ ಕೊಲ್ಲಿ ಕದನದಲ್ಲಿ ಪಂಜಾಬ್ ತಂಡವು ಸೋಲಿನೊಂದಿಗೆ ಈ ಭಾರಿಯ ಟೂರ್ನಿಯಿಂದ ಹೊರ ನಡೆಯಿತು. ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ 13 ನೇ ಆವೃತಿಯ ಐಪಿಎಲ್ನ 53ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಗೆ ಬೀರಿತು. ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕಣಕ್ಕಿಳಿದ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಲಿನೊಂದಿಗೆ ಈ ಭಾರಿಯ ಟೂರ್ನಿಯನ್ನು ಅಂತ್ಯಗೊಳಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡದ ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ 5 ಓವರ್ನಲ್ಲೇ 44 ರನ್ ಕಲೆ ಹಾಕಿದ್ರು. ಈ ವೇಳೇ ಬೌಲಿಂಗ್ ದಾಳಿಗಿಳಿದ ಚೆನ್ನೈ ತಂಡದ ವೇಗಿ ಎನ್ಗಿಡಿ 26 ರನ್ ಸಿಡಿಸಿದ್ದ ಮಯಾಂಕ್ರನ್ನು ಬೌಲ್ಡ್ ಮಾಡಿ ಪೆವಿಲಿಯಮನ್ ಗೆ ಅಟ್ಟಿದ್ರು. ಇನ್ನೂ ಸ್ಫೋಟಕ ಆಟಗಾರ ನಿಕೋಲಸ್ ಪೂರನ್ ಆಟವು ಕೇವಲ 2 ರನ್ ಗೆ ಅಂತ್ಯವಾಯಿತು. ಇನ್ನೂ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಕೇವಲ 12 ರನ್ ಗಳಿಸಿ ತಾಹೀರ್ ಸ್ಪಿನ್ ಬಲೆಗೆ ಸಿಲುಕಿ ನಿರಾಸೆ ಮೂಡಿಸಿದರು. ಈ ವೇಳೆ ಜೊತೆಯಾದ ಮಂದೀಪ್ ಸಿಂಗ್ ಹಾಗೂ ದೀಪಕ್ ಹೂಡ ತಂಡದ ಮೊತ್ತವನ್ನು 100ರ ಗೆರೆ ದಾಟಿಸಿದರು. ಈ ವೇಳೆ ಸ್ಫೋಟಕ ಆಟಕ್ಕೆ ಒತ್ತುಕೊಟ್ಟ ದೀಪಕ್ ಹೂಡಾ ಚೆನ್ನೈ ಬೌಲರ್ ಗಳ ಮೇಲೆ ಸವಾರಿ ಮಾಡಿದ್ರು. ಮಧ್ಯಮ ಕ್ರಮಾಂಕದಲ್ಲಿ ಮಂಕಾಗಿದ್ದ ಪಂಜಾಬ್ ಗೆ ತಮ್ಮ ಸ್ಫೋಟಕ ಆಟದ ಮೂಲಕ ದೀಪಕ್ ಹುಡಾ ಹೊಸ ಚೈತನ್ಯ ತುಂಬಿದ್ರು. 30 ಎಸೆತಗಳನ್ನು ಎದುರಿಸಿದ ಹೂಡ 4 ಸಿಕ್ಸರ್ ಹಾಗು 3 ಬೌಂಡರಿ ನೆರವಿನಿಂದ ಅಜೇಯ 62 ರನ್ ಸಿಡಿಸಿ ತಂಡದ ಮೊತ್ತವನ್ನು 150 ರ ಗೆರೆ ದಾಟಿಸಿದ್ರು. ಅಂತಿಮವಾಗಿ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.
154 ರನ್ಗಳ ಸಾಧಾರಾಣ ಗುರಿ ಬೆನ್ನಟ್ಟಿದ ಚೆನ್ನೈ ತಂಡವು ಉತ್ತಮ ಆರಂಭ ಪಡೆಯಿತು. ಚೆನ್ನೈ ಆರಂಭಿಕ ಜೋಡಿ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ರು. ಮೊದಲ ವಿಕೆಟ್ಗೆ ಈ ಜೋಡಿಯು ಬರೋಬ್ಬರಿ 82 ರನ್ಗಳ ಕಾಣಿಕೆ ನೀಡಿತು. 34 ಎಸೆತಗಳಲ್ಲಿ 48 ರನ್ ಸಿಡಿಸಿ ಡುಪ್ಲೆಸಿಸ್ ಪಂಜಾಬ್ ವೇಗಿ ಜಾರ್ಡನ್ ಗೆ ವಿಕೆಟ್ ವೊಪ್ಪಿಸಿದ್ರು. ನಂತರ ಬಂದ ಅಂಬಟಿ ರಾಯುಡು ಬೊಂಬಾಟ್ ಆಟವಾಡಿದ್ರು. ಅಂಬಟಿ ರಾಯುಡು –ಗಾಯಕ್ವಾಡ್ ಮುರಿಯದ ಜೊತೆಯಾಟವು ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಿತು. ಐಪಿಎಲ್ ನಲ್ಲಿ ಮತ್ತೊಂದು ಸೊಗಸಾದ ಇನ್ನಿಂಗ್ಸ್ ಕಟ್ಟಿದ ಗಾಯಕ್ವಾಡ್ ಅರ್ಧ ಶತಕ ಸಿಡಿಸಿ ಮಿಂಚಿದ್ರು. ಈ ಮೂಲಕ 13 ನೇ ಆವೃತಿಯ ಐಪಿಎಲ್ ನಲ್ಲಿ ಹ್ಯಾಟ್ರಿಕ್ ಅರ್ಧ ಶತಕದ ಸಿಡಿಸಿದ ಸಾಧನೆ ಮಾಡಿದ್ರು. ಗಾಯಕ್ವಾಡ್ 69 ಹಾಗೂ ಅಂಬಟಿ ರಾಯುಡು ಅಜೇಯರಾಗಿ ಸಿಡಿಸಿದ 30 ರನ್ ಗಳ ನೆರವಿನಿಂದ ಚೆನ್ನೈ ತಂಡವು 18.5 ಓವರ್ ನಲ್ಲಿ ಗೆಲುವಿನ ಗೆರೆ ದಾಟಿತು. ಪಂಜಾಬ್ ತಂಡವು ಈ ಸೋಲಿನೊಂದಿಗೆ ಟೂರ್ನಿಯ ಪ್ಲೇ ಆಫ್ ಹಂತದಿಂದ ಹೊರಬಿದ್ದರೆ, ಗೆದ್ದ ಚೆನ್ನೈ ತಂಡ ಕೂಡ ಪ್ಲೇ ಹಂತದಿಂದ ಹೊರ ನಡೆಯಿತು. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನೊಂದಿಗೆ ಈ ಭಾರಿಯ ಟೂರ್ನಿಗೆ ವಿದಾಯ ಹೇಳಿತು.
ಇನ್ನೂ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ಪ್ಲೇ ಆಫ್ ಹಂತಕ್ಕೇರವಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಗೆದ್ದ ತಂಡವು ನೇರವಾಗಿ ಪ್ಲೆ ಆಫ್ ಹಂತಕ್ಕೆ ಲಗ್ಗೆ ಇಟ್ಟರೆ ಸೋತ ತಂಡದ ಭವಿಷ್ಯ ಇತರೆ ತಂಡದ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ. ಒಟ್ಟಿನಲ್ಲಿ ಈ ಭಾರಿಯ ಮಹತ್ವದ ಪಂದ್ಯವೊಂದು ಇಂದು ನಡೆಯಲಿದ್ದು,ಯಾವ ತಂಡ ಗೆಲುವಿನ ಕೇಕೆ ಹಾಕುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.