ಬೆಳಗಾವಿ: ‘ವ್ಯಕ್ತಿಯೊಬ್ಬ ಜನವರಿ 14ರ ನಂತರ ನಾನು ಮುಖ್ಯಮಂತ್ರಿ ಆಗುತ್ತೇನೆಂದು ಹೇಳಿಕೊಂಡು ಹುಚ್ಚನಂತೆ ಓಡಾಡುತ್ತಿದ್ದಾನೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ಅವರನ್ನು ಟೀಕಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಆತ, ರಾಜ್ಯದ ಮಹಾನ್ ನಾಯಕರನ್ನು ಎಲ್ಲ ರೀತಿಯಲ್ಲೂ ಸಂತೃಪ್ತಿಪಡಿಸಿದ್ದೇನೆ. ಅವರಿಗೆ ಸಕಲ ಐಶ್ವರ್ಯ- ಬೋಗಗಳನ್ನು ದಯಪಾಲಿಸಿದ್ದೇನೆ. ಹೀಗಾಗಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಕೊಂಡಿದ್ದಾರೆ’ ಎಂದು ಆರೋಪಿಸಿದರು.
ಜನವರಿ ನಂತರ ರಾಜಕೀಯ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ, ‘ನಮ್ಮ ಪ್ರಧಾನಿ ಬಹಳ ಗಟ್ಟಿಯಾಗಿದ್ದಾರೆ. ಯಾವುದೇ ಆಸೆ- ಆಮಿಷಗಳಿಗೆ ಒಳಗಾಗಿ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಮುಖ್ಯಮಂತ್ರಿ ಆಗುತ್ತೇನೆಂದು ಹೇಳಿಕೊಂಡು ಓಡಾಡುವವರ ಬಾಯಿಗೆ ಬೀಗ ಹಾಕಬೇಕು. ಅಂಥವರು ಮುಖ್ಯಮಂತ್ರಿಯಾದರೆ ದೊಡ್ಡ ಅನಾಹುತ ಆಗುತ್ತದೆ ಎಂದು ಈಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಚರಿಕೆ ಕೊಟ್ಟಿದ್ದೇನೆ’ ಎಂದರು.