ಚಿಂತಾಮಣಿ ಕೊಡ್ಲೆಕೆರೆಯವರು 1961ರ ಜನವರಿ 18ರಂದು ಗೋಕರ್ಣದ ಬಳಿಯ ಅಘನಾಶಿನಿಯಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಆರಂಭಿಕ ವಿದ್ಯಾಭ್ಯಾಸ ಹಿರೇಗುತ್ತಿಯಲ್ಲಿ ನಡೆಯಿತು. ಕುಮಟಾ, ಶಿರ್ಸಿ, ಧಾರವಾಡಗಳಲ್ಲಿ ಕಾಲೇಜು ವ್ಯಾಸಂಗ ನಡೆಸಿ ಧಾರವಾಡದಲ್ಲಿ ಬಿ.ಎಸ್ಸಿ ಪದವಿ ಪಡೆದರು. ತ್ರಿವೆಂಡ್ರಮ್ನಲ್ಲಿ ಒಂದು ವರ್ಷದ ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್ ತರಬೇತಿ ಪಡೆದರಲ್ಲದೆ, ಬೆಂಗಳೂರಿನಲ್ಲಿ ಎಂ.ಬಿ.ಎ. ಪದವಿ ಗಳಿಸಿದರು.ಚಿಂತಾಮಣಿ ಕೊಡ್ಲೆಕೆರೆಯವರು ‘ಬಿಎಸ್ಎನ್ಎಲ್’ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ತೀವ್ರ ಅಧ್ಯಯನಾಸಕ್ತಿ ಉಳ್ಳ ಇವರು ಹಂಪಿ ವಿಶ್ವವಿದ್ಯಾಲಯದಿಂದ “ಕನ್ನಡ ಕಾವ್ಯದ ಪರಿಪ್ರೇಕ್ಷ್ಯದಲ್ಲಿ ಕಾವ್ಯ ಮತ್ತು ತಾತ್ವಿಕತೆಗಳ ಸಂಬಂಧ” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಗೌರವ ಗಳಿಸಿದ್ದಾರೆ.ಚಿಂತಾಮಣಿ ಕೊಡ್ಲೆಕೆರೆ ಅವರಿಗೆ ಎಳೆವೆಯಿಂದಲೇ ಕಾವ್ಯಾಸಕ್ತಿ ಬೆಳೆಯಿತು. ಮಾಸಿಕ ಪತ್ರಿಕೆಗಳಿಗೆ ಮೊದಲು ಹನಿಗವನಗಳನ್ನು ಬರೆದರು. ಇವರ ಮೊದಲ ಕವಿತೆ ಉದಯವಾಣಿಯಲ್ಲಿ ಪ್ರಕಟಗೊಂಡಿತು. ವಿದ್ಯಾರ್ಥಿ ದೆಸೆಯಲ್ಲೇ ಬರೆದ ‘ಬದುಕು ಬೇಡ ಅನ್ನಿಸಲ್ಲಿಲ್ಲ’ ಎಂಬ ಪದ್ಯಕ್ಕೆ ಬಹುಮಾನ ಸಂದಿತು. ಹೊನ್ನಾವರದ ಸ್ಥಳೀಯ ಪತ್ರಿಕೆಗೆ ‘ಮುಖಾಮುಖಿ’ ಎಂಬ ತಲೆಬರಹದ ಅಂಕಣ ಬರಹ ಮಾಡಿದರು. ಕನ್ನಡಪ್ರಭ, ಕರ್ಮವೀರ ವಿಶೇಷಾಂಕಗಳಲ್ಲಿ ಇವರ ಕಥೆಗಳು ಬಹುಮಾನ ಗಳಿಸಿದವು. ಕನ್ನಡಪ್ರಭ, ವಿಜಯಕರ್ನಾಟಕ ಪತ್ರಿಕೆಯಲ್ಲಿ ಕಾವ್ಯ ವಿಮರ್ಶೆ ಬರೆದರು.ಚಿಂತಾಮಣಿ ಕೊಡ್ಲೆಕೆರೆ ಅವರ ಕೃತಿಗಳಲ್ಲಿ ಈ ಜಗತ್ತು, ಭೂಮಧ್ಯರೇಖೆ, ಚಂದ್ರದೀಪ, ಮೈಮರೆತು ಕುಣಿವೆ, ನೀರ ಹೆಜ್ಜೆ ಕವನ ಸಂಕಲನಗಳು; ಬಭ್ರುವಾಹನ ಮತ್ತು ಇರುವೆ, ಮಾಯಾವಿ ಮಾಂಗಿ ಕಥಾಸಂಕಲನಗಳು; ಸಿಂಡ್ರೆಲಾ-ಅಂಬ್ರಲಾ ಮಕ್ಕಳ ಕವಿತೆಗಳು; ಮೊದಲ ಮನೆಯ ಮೆಟ್ಟಿಲು ಪ್ರಬಂಧ ಸಂಕಲನ; 68ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಟವಾದ ‘ಜನಕನ ಕನಸು’ ಲೇಖನ ಸಂಗ್ರಹ; ವಿನೋಬಾ ಭಾವೆ, ರಮಣ ಮಹರ್ಷಿ, ರಾಘವೇಂದ್ರ ಪಾಟೀಲ ವ್ಯಕ್ತಿ ಚಿತ್ರಣಗಳು; ಪೀಟರ್ ವ್ಯಾಟ್ಸನ್ ವಿಚಾರ ಕಥನ ಅನುವಾದ (ಡಾ. ವಿಜಯಾ ಗುತ್ತಲ ಅವರೊಂದಿಗೆ) ಸೇರಿದಂತೆ ಅನೇಕ ವೈವಿಧ್ಯಗಳಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: