ಬೆಂಗಳೂರು, ಏಪ್ರಿಲ್ 19 : ದೇಶದಲ್ಲಿ ಮತ್ತೆ ಕೊರೊನಾ ನಾಲ್ಕನೇ ಭೀತಿ ಶುರುವಾಗಿದ್ದು, ಈಗಾಗಲೇ ದೆಹಲಿ, ಉತ್ತರ ಪ್ರದೇಶ, ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲೂ ಕೊರೊನಾ ನಾಲ್ಕನೇ ಅಲೆ ಬರಬಹುದು ಎಂಬ ಭೀತಿ ಇರುವುದರಿಂದ ಪೋಷಕರು ಮಕ್ಕಳನ್ನ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.
ಇದರಿಂದ ಖಾಸಗಿ ಶಾಲೆಗಳಿಗೆ ಭಾರಿ ಹೊಡೆತ ಬಿದ್ದಿದ್ದು, ಮುಂಬರುವ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನ ದಾಖಲಿಸಿಕೊಳ್ಳಲು ಖಾಸಗಿ ಶಾಲೆಗಳು ಹೆಣಗಾಡುತ್ತಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ವೇಳಾಪಟ್ಟಿ ಪ್ರಕಾರ ಮೇ 16 ರಂದು ಶಾಲೆಗಳು ಪುನಾರಂಭಗೊಳ್ಳಲಿದೆ. ಆದರೆ ಈ ಬಾರಿಯ 2022-23 ರ ಶೈಕ್ಷಣಿಕ ಪ್ರವೇಶ ದಾಖಲಾತಿಗಳು 20 ರಿಂದ 30% ರಷ್ಟು ಕಡಿಮೆಯಾಗಿದೆ. ಕೊರೊನಾ ಬರುವ ಮುಂಚಿನ ವರ್ಷಗಳಿಗೆ ಹೋಲಿಸಿದರೆ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಈ ರೀತಿ ಕಡಿಮೆ ದಾಖಲಾತಿ ಆಗಲು ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ಲಾಕ್ಡೌನ್ನಿಂದಾಗಿ ಸಾಂಕ್ರಾಮಿಕ ಸಮಯದಲ್ಲಿ ಬೆಂಗಳೂರಿನಿಂದ ವಲಸೆ ಹೋದ ಅನೇಕ ಪೋಷಕರು ಇನ್ನೂ ಹಿಂತಿರುಗಿಲ್ಲ, ಮತ್ತೊಂದು ಕಾರಣ ಎಂದರೆ ನಾಲ್ಕನೇ ಅಲೆ ಬರುವ ಭೀತಿಯಿಂದಲೂ ಕೂಡ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಸೇರಿಸುತ್ತಿಲ್ಲ ಅಂತ ಖಾಸಗಿ ಶಾಲೆಗಳು ಅವಲತ್ತುಕೊಂಡಿವೆ.
ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರಧಾನ ಕಾರ್ಯದರ್ಶಿಯಾದ ಡಿ ಶಶಿಕುಮಾರ್ ಶಾಲಾ ದಾಖಲಾತಿ ಕುಸಿತದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಪೋಷಕರಿಗೆ ಆರ್ಥಿಕ ಸಮಸ್ಯೆಯಿಲ್ಲ, ಬದಲಾಗಿ ಮುಂದೆ ನಾಲ್ಕನೇ ಅಲೇ ರಾಜ್ಯಕ್ಕೂ ಬರಬಹುದು ಎಂಬ ಭೀತಿ ಇದೆ. ಹೀಗಾಗಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಖಾಸಗಿ ಶಾಲೆಗಳಲ್ಲಿ 20 ರಿಂದ 30%ರಷ್ಟು ದಾಖಲಾತಿ ಕಡಿಮೆಯಾಗಲು ಕಾರಣವಾಗಿದೆ,” ಎಂದು ಡಿ ಶಶಿಕುಮಾರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 19 ಸಾವಿರಕ್ಕೂ ಹೆಚ್ಚು ಖಾಸಗಿ ಅನುದಾನರಹಿತ ಶಾಲೆಗಳಿವೆ. ಈ ಶಾಲೆಗಳು ಶೇಕಡ 90 ಅಂದರೆ, ವಾರ್ಷಿಕ ಶುಲ್ಕ 10 ಸಾವಿರದಿಂದ 40 ಸಾವಿರದಷ್ಟು ಹಣ ನಿಗದಿ ಮಾಡುತ್ತವೆ.
ಬೆಂಗಳೂರಿನ ನಾಗರಭಾವಿಯಲ್ಲಿರುವ ಆಕ್ಸ್ಫರ್ಡ್ ಶಾಲೆಯು ಶೈಕ್ಷಣಿಕ ಆರಂಭಕ್ಕೂ ಮುನ್ನ ಸಾಕಷ್ಟು ಪೋಷಕರು ತಮ್ಮ ಮಕ್ಕಳನ್ನ ಈ ಶಾಲೆಗೆ ದಾಖಲಿಸಲು ವಿಚಾರಣೆಗೆ ಆಗಮಿಸುತ್ತಿದ್ದರು, ಹಾಗೂ ತಮ್ಮ ಮಕ್ಕಳನ್ನ ಶಾಲೆಗೆ ಪ್ರವೇಶಾತಿ ಮಾಡಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ನಾಲ್ಕನೇ ಅಲೆ ಆತಂಕದಿಂದ ಶಾಲೆ ಬಳಿ ಅಷ್ಟಾಗಿ ಪೋಷಕರು ಆಗಮಿಸುತ್ತಿಲ್ಲ. ಇದರಿಂದಾಗಿ ಪ್ರವೇಶಾತಿ ಶೇಕಡ 8-9 ರಷ್ಟು ಕುಸಿತವಾಗಿದೆ.
ಈ ಬಗ್ಗೆ ಶಾಲಾ ಪ್ರಾಂಶುಪಾಲರಾದ ಸುಪ್ರೀತ್ ಬಿ.ಆರ್ ಮಾತನಾಡಿದ್ದು, “ಕೊರೊನಾ ಕಾರಣಕ್ಕೆ ಬೆಂಗಳೂರಿನಿಂದ ವಲಸೆ ಹೋದ ಎಷ್ಟೋ ಜನರು ಮತ್ತೆ ಮರಳಿ ಬರಲು ಇಷ್ಟ ಪಡುತ್ತಿಲ್ಲ. ಇದು ಕೂಡ ದಾಖಲಾತಿ ಕುಂಠಿತಕ್ಕೆ ಕಾರಣವಾಗಿದೆ. ಸದ್ಯಕ್ಕೆ ಬೆಂಗಳೂರಿಗೆ ಹತ್ತಿರವಿರುವ ಕೆಲ ನಗರದ ಜನರು ಮಾತ್ರ ಪ್ರವೇಶಾತಿ ಮಾಡಿಸುತ್ತಿದ್ದಾರೆ. ವಿಪರ್ಯಾಸ ಎಂದರೆ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿರುವ ವಿದ್ಯಾರ್ಥಿಗಳ ಪೋಷಕರು ನಾಲ್ಕನೇ ಅಲೆ ಭೀತಿಯಿಂದ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ,” ಎಂದು ಪ್ರಾಂಶುಪಾಲ ಸುಪ್ರೀತ್ ಬಿ.ಆರ್ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada