ನಿನ್ನೆ ನಡೆದ ಐಪಿಎಲ್ ಮಹಾ ಸಮರದಲ್ಲಿ ಮಾಹಿ ಪಡೆ ಗೆಲುವಿನ ಕೇಕೆ ಹಾಕಿತು. ಕೊನೆಯ ಬಾಲ್ ತನಕ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಚೆನ್ನೈ ತಂಡವು ಗೆಲುವಿನ ನಗೆ ಬೀರಿತು.ಡೆತ್ ಓವರ್ ನಲ್ಲಿ ಜಡೇಜಾ ಆರ್ಭಟಿಸಿ ಕೆಕೆಆರ್ ತಂಡದ ಗೆಲುವಿನ ಕನಸಿಗೆ ಕೊಳ್ಳಿ ಇಟ್ರು. ಇದರಿಂದ ಮಾರ್ಗನ್ ಪಡೆಯ ಪ್ಲೇ ಆಫ್ ಕನಸು ಕಮರಿ ಹೋಯಿತು..
ಕೊಲ್ಲಿ ಕದನದಲ್ಲಿ ನಿನ್ನೆಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿಗಾಗಿ ಜಿದ್ದಿಗೆ ಬಿದ್ದವು. ಧೋನಿ ಬಳಗಕ್ಕೆ ನಿನ್ನೆಯ ಪಂದ್ಯ ಕೇವಲ ಔಪಾಚಾರಿಕತೆಯ ಮ್ಯಾಚ್ ಆದರೆ ಕೆಕೆಆರ್ ಗೆ ಡು ಆರ್ ಡೈ ಪಂದ್ಯವಾಗಿತ್ತು. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬೌಲಿಂಗ್ ಮಾಡುವ ನಿರ್ಧಾರಕ್ಕೆ ಬಂದ್ರು. ನಿನ್ನೆಯ ಪಂದ್ಯದಲ್ಲಿ ಧೋನಿ ತಮ್ಮ ತಂಡದಲ್ಲಿ 3 ಬದಲಾಣೆ ಮಾಡಿದ್ರು. ಮೋನುಕುಮಾರ್, ಫಾಫ್ ಡು ಪ್ಲೆಸಿಸ್ ಹಾಗೂ ಇಮ್ರಾನ್ ತಾಹಿರ್ ರನ್ನು ಕೈ ಬಿಟ್ಟು, ಕರ್ನ್ ಶರ್ಮಾ, ವಾಟ್ಸನ್ ಹಾಗೂ ಎಂಗಿಡಿಗೆ ಅವಕಾಶ ಕಲ್ಪಿಸಿದ್ರು. ಕೆಕೆಆರ್ ತಂಡವು ನಿರ್ಣಾಯಕ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಂಡಿತು. ಕನ್ನಡಿಗ ಪ್ರಸಿದ್ ಕೃಷ್ಣ ಬದಲು ರಿಂಕು ಸಿಂಗ್ ಅವರಿಗೆ ಮಾರ್ಗನ್ ತಂಡದಲ್ಲಿ ಸ್ಥಾನ ಕಲ್ಪಿಸಿದ್ರು. ಟಾಸ್ ಸೋತು ಮೊದಲು ನಡೆಸಿದ ಕೆಕೆಆರ್ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಶುಭ್ಮನ್ ಗಿಲ್ ಹಾಗೂ ನಿತೀಶ್ ರಾಣ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ್ರು. ಮೊದಲ ಪವರ್ ಪವರ್ ಪ್ಲೇ ಅಂತ್ಯಕ್ಕೆ ಕೆಕೆಆರ್ ಆರಂಭಿಕ ಜೋಡಿಯು 48 ರನ್ ಕಲೆಹಾಕಿತು.
8ನೇ ಓವರ್ ನಲ್ಲಿ ದಾಳಿಗಿಳಿದ ಸ್ಪಿನ್ನರ್ ಕರ್ಣ್ ಶರ್ಮಾ 26 ರನ್ ಗಳಿಸಿದ್ದ ಶುಭ್ಮನ್ ಗಿಲ್ ರನ್ನು ಪೆವಿಲಿಯನ್ ಗೆ ಅಟ್ಟಿದ್ರು. ನಂತರ ಬಂದ ಸುನಿಲ್ ನರೈನ್ ಆಟ ಕೇವಲ ಒಂದು ಸಿಕ್ಸ್ ಗೆ ಅಂತ್ಯವಾಯಿತು. ಇನ್ನೂ ಇದೇ ಮೊದಲ ಬಾರಿಗೆ ವಿಶ್ವದ ಶ್ರೀಮಂತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡ ರಿಂಕು ಸಿಂಗ್ ಕೇವಲ 11 ರನ್ ಗಳಿಸಿ ನಿರ್ಗಮಿಸಿದ್ರು.
ಇನ್ನೂ ಒಂದು ವಿಕೆಟ್ ಉರುಳುತ್ತಿದ್ರೂ ಉದಯೋನ್ಮುಖ ಪ್ರತಿಭೆ ನಿತೀಶ್ ರಾಣಾ ದುಬೈ ಮಣ್ಣಿನಲ್ಲಿ ರಣ ರಣಿಸಿದ್ರು. ಚೆನ್ನೈ ಬೌಲರ್ ಗಳ ಬೆಂಡೆತ್ತಿದ ರಾಣಾ ಅರ್ಧ ಶತಕ ಸಿಡಿಸಿ ಮಿಂಚಿದ್ರು. ಅರ್ಧ ಶತಕದ ಬಳಿಕ ನಿತೀಶ್ ರಾಣಾ ತಮ್ಮ ಬ್ಯಾಟಿಂಗ್ ನಲ್ಲಿ ಮತ್ತಷ್ಟು ವೇಗ ಪಡೆದುಕೊಂಡ್ರು. 16 ನೇ ಓವರ್ ನಲ್ಲಿ ಕರ್ನ್ ಶರ್ಮಾ ಎಸೆತದಲ್ಲಿ ರಾಣಾ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಗಮನಸೆಳೆದ್ರು. ಧೋನಿ ಬಳಗದ ಬೌಲರ್ ಗಳ ಮೇಲೆ ಸವಾರಿ ಮಾಡಿದ ನಿತೀಶ್ ರಾಣಾ 87 ರನ್ ಚಚ್ಚಿದ್ರು. 61 ಎಸೆತಗಳನ್ನು ಎದುರಿಸಿದ ರಾಣಾ 10 ಬೌಂಡರಿ, 4 ಸಿಕ್ಸರ್ ನೆರವಿನಿಂದ 87 ರನ್ ಬಾರಿಸಿ ಸ್ಪಿನ್ನರ್ ಕರ್ನ್ ಶರ್ಮಾ ಓವರ್ ನಲ್ಲಿ ಔಟಾದ್ರು. ಸ್ಲಾಗ್ ಓವರ್ ನಲ್ಲಿ ಹಾಲಿ ನಾಯಕ ಇಯಾನ್ ಮಾರ್ಗನ್ ಹಾಗೂ ಮಾಜಿ ನಾಯಕ ದಿನೇಶ್ ಕಾರ್ತಿಕ್ ಹೋರಾಟ ನಡೆಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದ್ರು.ಅಂತಿಮವಾಗಿ ಕೆಕೆಆರ್ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.
173 ರನ್ ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಶೇನ್ ವಾಟ್ಸನ್ ಹಾಗೂ ಋತುರಾಜ್ ಗಾಯಕ್ವಾಡ್ ಮೊದಲ ವಿಕೆಟ್ ಗೆ ಅರ್ಧ ಶತಕದ ಜೊತೆಯಾಟ ವಾಡಿದ್ರು. ತಂಡದ ಸ್ಕೋರ್ 50 ಆಗುತ್ತಿದ್ದಂತೆಯೇ ಶೇನ್ ವಾಟ್ಸನ್ ಕೇವಲ 14 ರನ್ ಗಳಿಸಿ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ವಿಕೆಟ್ ವೊಪ್ಪಿಸಿದ್ರು. ಮಧ್ಯಕ ಕ್ರಮಾಂಕದಲ್ಲಿ ಋತುರಾಜ್ ಗಾಯಕ್ವಾಡ್ ಹಾಗೂ ಅಂಬಟಿ ರಾಯುಡು ಚೆನ್ನೈಗೆ ಆಸರೆಯಾದ್ರು. ಆರ್.ಸಿ.ಬಿ ವಿರುದ್ಧ ಅರ್ಧ ಶತಕ ಸಿಡಿಸುವ ಮೂಲಕ ಫಾರ್ಮ್ ಕಂಡು ಕೊಂಡಿದ್ದ ಗಾಯಕ್ವಾಡ್ ನಿನ್ನೆ ಅದೇ ಫಾರ್ಮನ್ನ ಮುಂದುವರೆಸಿದ್ರು. ಕೆಕೆಆರ್ ವಿರುದ್ಧ ಕರಾರುವಕ್ಕಾದ ಬ್ಯಾಟಿಂಗ್ ನಡೆಸಿದ ಗಾಯಕ್ವಾಡ್ ಅರ್ಧ ಶತಕ ಸಿಡಿಸಿ ಮಿಂಚಿದ್ರು.ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ರಾಯುಡು-ಗಾಯಕ್ವಾಡ್ ಜೋಡಿಯು ಅರ್ಧ ಶತದಕ ಜೊತೆಯಾಟವಾಡುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿತು., ರಾಯುಡು 20 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 38 ರನ್ ಗಳಿಸಿ ಪ್ಯಾಕ್ ಕಮಿನ್ಸ್ ಗೆ ವಿಕೆಟ್ ವೊಪ್ಪಿಸಿದ್ರು. ರಾಯುಡು ಔಟಾಗುತ್ತಿದ್ದಂತೆಯೇ ಕ್ರೀಸ್ ಗೆ ಬಂದ ನಾಯಕ ಮಹೇಂಧ್ರ ಸಿಂಗ್ ಧೋನಿ ಮತ್ತೆ ವೈಫಲ್ಯ ಅನುಭವಿಸಿದ್ರು. ಒಂದು ರನ್ ಗಳಿಸಿದ್ದ ಧೋನಿಯನ್ನು ಸ್ಪಿನ್ನರ್ ವರುಣ್ ಚಕ್ರವರ್ತಿ ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್ ಗೆ ಅಟ್ಟಿದ್ರು. ಧೋನಿ ಬೇಗನೆ ಔಟಾಗಿದ್ದರಿಂದ ಪಂದ್ಯವು ಮತ್ತಷ್ಟು ರೋಚಕತೆ ಪಡೆದುಕೊಳ್ತು. ಅಂತಿಮ ಮೂರು ಓವರ್ ನಲ್ಲಿ ಚೆನ್ನೈ ಗೆ ಗೆಲುವಿಗೆ 34 ರನ್ ಗಳ ಅಗತ್ಯವಿತ್ತು. ಆದರೆ 17 ನೇ ಓವರ್ ಎಸೆದ ವೇಗಿ ಪ್ಯಾಟಿಸನ್ ಮಾರಕ ಬೌಲಿಂಗ್ ದಾಳಿ ನಡೆಸಿದ್ರು. ಆ ಓವರ್ ನಲ್ಲಿ ಕೇವಲ ನಾಲ್ಕು ರನ್ ಬಿಟ್ಟು ಕೊಟ್ಟು ಗಾಯಕ್ವಾಡ್ ಗೆ ಪೆವಿಲಿನ್ ದಾರಿ ತೋರಿಸಿದ್ರು. ಆದರೆ 18 ನೇ ಓವರ್ ಎಸೆದ ಫ್ಯಾರ್ಗ್ಯುಸನ್ 20 ರನ್ ಬಿಟ್ಟುಕೊಟ್ರು. ಇದರಿಂದ ಕೊನೆಯ ಓವರ್ ನಲ್ಲಿ ಚೆನ್ನೈ ಗೆಲುವಿಗೆ 10 ರನ್ ಗಳ ಅಗತ್ಯವಿತ್ತು. ಕಡೆಯ 2 ಬಾಲ್ ನಲ್ಲಿ ಚೆನ್ನೈ ಗೆಲುವಿಗೆ 7 ರನ್ ಗಳ ಬೇಕಾಗಿತ್ತು. ಜಡೇಜಾ ಎರಡು ಬಾಕ್ ಟು ಬಾಕ್ ಸಿಕ್ಸ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ರು.ಜಡೇಜಾ ಸ್ಫೋಟದ ಆಟದ ಎದುರು ಕೆಕೆಆರ್ ಪ್ಲೇ ಆಫ್ ಕನಸು ಕಮರಿ ಹೋಗುವಂತ್ತಾಯಿತು. ಜಡೇಜಾ ಜಾದು ಎದುರು ಇಯಾನ್ ಮಾರ್ಗನ್ ಯಾವುದೇ ವರ್ಕೌಟ್ ಆಗಲಿಲ್ಲ. ಡೆತ್ ಓವರ್ ನಲ್ಲಿ ಜಡೇಜಾ ಅಬ್ಬರಿಸಿದ ಪರಿಣಾಮ ಚೆನ್ನೈ ತಂಡವು ಕಡೆಯ ಬಾಲ್ ನಲ್ಲಿ ಗೆಲುವಿನ ಕೇಕೆ ಹಾಕಿತು. ಜಡೇಜಾ 11 ಎಸೆತದಲ್ಲಿ 31 ರನ್ ಸಿಡಿಸಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.
ಇಂದು ಐಪಿಎಲ್ ಅಭಿಮಾನಿಗಳಿಗೆ ಮತ್ತೊಮ್ಮೆ ರಸದೌತನ ಸಿಗಲಿದೆ.ಇಂದು ನಡೆಯುವ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗು ರಾಜಸ್ಥಾನ ರಾಯಲ್ಸ್ ಸೆಣಸಾಡಲಿವೆ. ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಗೆದ್ದ ತಂಡವು ಪ್ಲೇ ಆಫ್ ಹಂತವನ್ನ ಜೀವಂತ್ತವಾಗಿರಿಸಿದರೆ , ಪರಾಭವ ಗೊಂಡ ತಂಡಕ್ಕೆ ಪ್ಲೇ ಆಫ್ ಬಾಗಿಲು ಮುಚ್ಚಿ ಹೋಗಲಿದೆ. ಉಭಯ ತಂಡ ಕೂಡ ಬಲಿಷ್ಠವಾಗಿರುವ ಕಾರಣ ಈ ಪಂದ್ಯವನ್ನು ಪ್ರಬಲರ ನಡುವಿನ ಕದನ ಎಂದೇ ಬಿಂಬಿಸಲಾಗಿದೆ. ನಿರ್ಣಾಯಕ ಪಂದ್ಯದಲ್ಲಿ ಯಾರು ಗೆಲುವಿನ ಕೇಕೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.